ಅದ್ಧೂರಿಯಾಗಿ ನಡೆದ ಐತಿಹಾಸಿಕ ದೊಡ್ಡ ಬಸವೇಶ್ವರ ಮಹಾರಥೋತ್ಸವ

| Published : Mar 26 2024, 01:15 AM IST

ಸಾರಾಂಶ

ಉತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮದಿಂದ ಧೂಳುಗಾಯಿ, ಕಳಸ ಮತ್ತು ಪೂರ್ಣಕುಂಭದ ಮೆರವಣಿಗೆ ನಡೆಯಿತು.

ಕುರುಗೋಡು: ಪಟ್ಟಣದ ಐತಿಹಾಸಿಕ ದೊಡ್ಡಬಸವೇಶ್ವರ ಮಹಾ ರಥೋತ್ಸವ ವಿಜೃಂಭಣೆಯಿಂದ ಸೋಮವಾರ ಅದ್ಧೂರಿಯಾಗಿ ನಡೆಯಿತು.ರಥೋತ್ಸವ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ದೊಡ್ಡಬಸವೇಶ್ವರ ದೇವರಿಗೆ ವಿಶೇಷ ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಉತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮದಿಂದ ಧೂಳುಗಾಯಿ, ಕಳಸ ಮತ್ತು ಪೂರ್ಣಕುಂಭದ ಮೆರವಣಿಗೆ ನಡೆಯಿತು. ಬೆಳಗಿನಜಾವ ನೂರಾರು ಭಕ್ತರು ದೇವಸ್ಥಾನದಲ್ಲಿ ದೀಡ್ ನಮಸ್ಕಾರ ಮತ್ತು ೩೩ ಗ್ರಾಮಗಳಿಂದ ಪಾದಯಾತ್ರೆಯಲ್ಲಿ ಬಂದು ದೇವರ ದರ್ಶನ ಪಡೆದು ಪುನೀತರಾದರು.ನಂತರ ಹೂವುಗಳಿಂದ ಅಲಂಕೃತಗೊಂಡ ದೊಡ್ಡಬಸವೇಶ್ವರ ಗೂಳಿ ಮೆರವಣಿಗೆ ಸಕಲ ವಾದ್ಯ ಹಾಗೂ ಮುತ್ತೈದೆಯರ ಕಳಸದೊಂದಿಗೆ ನೀಲಮ್ಮ ಮಠಕ್ಕೆ ತೆರಳಿ ವಿಶೇಷ ಪೂಜೆ ನಡೆಸಿ ಮಠದ ಸ್ವಾಮಿಯನ್ನು ಮೆರವಣಿಗೆ ಮೂಲಕ ರಥಕ್ಕೆ ಕೆರೆ ತರಲಾಯಿತು.ಕುರುಗೋಡು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೊರ ಜಿಲ್ಲೆ ಹಾಗೂ ರಾಜ್ಯದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಇದ್ದರು. ತಂಪು ಪಾನೀಯ ವಿತರಣೆ:ರಥೋತ್ಸವದ ನಿಮಿತ್ತ ನಾನಾ ಯುವಕರು ನೀರಿನ ಮಜ್ಜಿಗೆ ಅರವಟ್ಟಿಗೆ ತೆರೆದು ಬಿಸಿಲಲ್ಲಿ ಬೆಂದ ಜನರಿಗೆ ತಂಪು ನೀಡಿದರು. ರಥೋತ್ಸವದಲ್ಲಿ ಪಾಲ್ಗೊಂಡ ಜನರಿಗೆ ಇಲಾಖೆ ವತಿಯಿಂದ ರೈತ ಸಮುದಾಯ ಭವನದಲ್ಲಿ ಹಾಗೂ ಖಾಸಗಿ ಮತ್ತು ನಾನಾ ಧಾರ್ಮಿಕ ಸಂಘಗಳು ಪಟ್ಟಣದ ಕಂಪ್ಲಿ, ಗೆಣಿಕೆಹಾಳ್, ಮುಷ್ಟಗಟ್ಟೆ ರಸ್ತೆ, ರಾಘವಾಂಕ ಮಠದಲ್ಲಿ ಬಾದನಹಟ್ಟಿಯಲ್ಲಿ, ಬಳ್ಳಾರಿ ರಸ್ತೆಯಲ್ಲಿ ಉಚಿತ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಬಿಗಿಭದ್ರತೆ:

ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವಿಶೇಷ ಬಂದೋಬಸ್ತ್ ಒದಗಿಸಿತ್ತು. ದೇವಸ್ಥಾನದ ಪ್ರಾಂಗಣದಲ್ಲಿ ತಾತ್ಕಾಲಿಕ ಮಹಿಳಾ ಪೊಲೀಸ್ ಠಾಣೆ ತೆರೆಯಲಾಗಿತ್ತು. ನಾನಾ ಗ್ರಾಮದಿಂದ ಬರುವ ವಾಹನ ನಿಲುಗಡೆಗೆ ೫ರಸ್ತೆಗಳಲ್ಲಿ ವಿಶೇಷ ನಿಲ್ದಾಣ ನಿರ್ಮಿಸಲಾಗಿತ್ತು. ಬಕ್ತರ ಪ್ರಾಯಣಕ್ಕೆ ಸಾರಿಗೆ ಇಲಾಖೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಕುರುಗೋಡು ಶಾಸಕ ಜೆ.ಎನ್. ಗಣೇಶ, ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು, ಡಿವೈಎಸ್ಪಿ ಪ್ರಸಾದ್ ಗೋಖಲೆ ರಥೋತ್ಸವದಲ್ಲಿ ಭಾಗವಹಿಸಿದ್ದರು.ಸಂಜೆ ೬ ಗಂಟೆಗೆ ೬೦ ಅಡಿ ಎತ್ತರದ ಮಹಾ ರಥೋತ್ಸವ ದೇವಸ್ಥಾನದ ಮುಂಭಾಗದಿಂದ ರಥಬೀದಿಯಲ್ಲಿ ಎದುರು ಬಸವಣ್ಣ ದೇವಸ್ಥಾನ ತಲುಪಿ ನಂತರ ಸ್ವಸ್ಥಾನಕ್ಕೆ ಹಿಂದಿರುಗಿತು.ರಾತ್ರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.