ಚಿಂತಾಮಣಿ: ಯಾವುದೇ ಅರ್ಹತೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ತಾಲೂಕಿನ ಬಟ್ಲಹಳ್ಳಿ ಗ್ರಾಮದ ಮನೆಯೊಂದರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಸಿರಿಂಜ್, ಸೂಜಿ, ಗ್ಲೂಕೋಸ್ ಬಾಟಲಿ ಇನ್ನಿತರೆ ವೈದ್ಯಕೀಯ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮದಲ್ಲಿ ಬಿ.ನಾರಾಯಣ ರೆಡ್ಡಿ (54) ಎಂಬವರೇ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ವ್ಯಕ್ತಿ ಎನ್ನಲಾಗಿದೆ. ಅಧಿಕಾರಿಗಳು ದಾಳಿ ನಡೆಸುವರೆಂಬ ಸುಳಿವಿನ ಮೇರೆಗೆ ನಾಪತ್ತೆಯಾಗಿದ್ದಾರೆ. ಗ್ರಾಮದಲ್ಲಿ ಜನರಿಗೆ ಚಿಕಿತ್ಸೆ ಹಾಗೂ ಮಹಿಳೆಯರಿಗೆ ಗರ್ಭಪಾತದ ಮಾತ್ರೆಗಳನ್ನು ನೀಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ.

ತಾಲೂಕು ಆರೋಗ್ಯ ಅಧಿಕಾರಿ ಡಾ. ಎಂ.ಎಸ್. ರಾಮಚಂದ್ರರೆಡ್ಡಿ, ಸಮುದಾಯ ಆರೋಗ್ಯ ಕೇಂದ್ರ ಬಟ್ಲಹಳ್ಳಿ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್‌ಕುಮಾರ್, ತಾಲೂಕಿನ ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ, ತಾಲೂಕು ಪಿಡಿಮಾಲಜಿಸ್ಟ್ ಪ್ರಶಾಂತ್ ಬಟ್ಟಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ಶೀಲಾ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿ ಶ್ರಾವಣಿ ಅವರ ಒಳಗೊಂಡ ತಂಡವು ದಾಳಿ ನಡೆಸಿ ತಪಾಸಣೆ ಮಾಡಿದೆ. ಯಾವುದೇ ವೈದ್ಯಕೀಯ ವಿದ್ಯಾಭ್ಯಾಸದ ದಾಖಲೆಗಳು ಇಲ್ಲದೆ ಇರುವುದು ಕಂಡುಬಂದಿದೆ.

ತಾಲೂಕು ಆರೋಗ್ಯ ಅಧಿಕಾರಿ ಡಾ. ಎಂ.ಎಸ್.ರಾಮಚಂದ್ರರೆಡ್ಡಿ ಅವರು ನಕಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾರೆ.