ಉಡುಪಿ: ಇಲ್ಲಿನ ಇಂದ್ರಾಳಿಯ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಾಲಯ ಪರಿಸರದಲ್ಲಿರುವ ಶ್ರೀ ಮುಖ್ಯಪ್ರಾಣ ಮತ್ತು ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಇಲ್ಲಿ ಅಳವಡಿಸಲಾಗಿರುವ ಬೃಹತ್ ಗಂಟೆಯನ್ನು ಗುರುವಾರ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಉದ್ಘಾಟಿಸಿದರು.

ನಂತರ ಶ್ರೀ ದೇವರ ಸನ್ನಿಧಿಯಲ್ಲಿ ಅಳವಡಿಸಲಾಗಿರುವ ಹನುಮಾನ್ ಚಾಲೀಸದ ಶಿಲಾಫಲಕವನ್ನು ಅನಾವರಣಗೊಳಿಸಲಾಯಿತು ಮತ್ತು ಸಾಮೂಹಿಕ ಹನುಮಾನ್ ಚಾಲೀಸ ಪಠಣಕ್ಕೆ ಚಾಲನೆ ನೀಡಲಾಯಿತು. ನಂತರ ಭಕ್ತರಿಂದ ಸಾಮೂಹಿಕ ಹನುಮಾನ್ ಚಾಲೀಸ ಪಠಣ, ಮಕ್ಕಳಿಂದ ಹಾಗೂ ವಿವಿಧ ತಂಡದವರಿಂದ ಭಜನೆ ಕಾರ್‍ಯಕ್ರಮ ಜರುಗಿತು. ಇದೇ ಸಂದರ್ಭ ಸರೋಜಿನಿ ಜಯ ಶೆಟ್ಟಿ ಅವರು ಸಂಪಾದಿಸಿದ ‘ಕಾರ್ಣಿಕದ ಕ್ಷೇತ್ರ ಇಂದ್ರಾಣಿ’ ಪುಸ್ತಕವನ್ನು ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಬಿಡುಗಡೆ ಮಾಡಿದರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಪಂಚದುರ್ಗಾಪರಮೇಶ್ವರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಕುಶಲ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿ ರತ್ನಾಕರ ಇಂದ್ರಾಳಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಬಡ್ನಾರು, ಯೋಗೀಶ ಭಟ್ ಮತ್ತು ವಿವಿಧ ಸಮಿತಿ ಪಧಾದಿಕಾರಿಗಳು, ನೂರಾರು ಭಕ್ತರು ಉಪಸ್ಥಿತರಿದ್ದರು.