ತಾಲೂಕಿನಲ್ಲಿ ಮಾನವ ಮತ್ತು ಕಾಡುಪ್ರಾಣಿ ಸಂಘರ್ಷ ತೀವ್ರವಾಗಿ ಹೆಚ್ಚುತ್ತಿದ್ದು ಚಿರತೆ ದಾಳಿಗೆ 4 ಹಸುಗಳು ಬಲಿಯಾದ ಘಟನೆ ಗಂಗವಾಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನಲ್ಲಿ ಮಾನವ ಮತ್ತು ಕಾಡುಪ್ರಾಣಿ ಸಂಘರ್ಷ ತೀವ್ರವಾಗಿ ಹೆಚ್ಚುತ್ತಿದ್ದು ಚಿರತೆ ದಾಳಿಗೆ 4 ಹಸುಗಳು ಬಲಿಯಾದ ಘಟನೆ ಗಂಗವಾಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗಂಗವಾಡಿ ಗ್ರಾಮದ ರಾಮಯ್ಯ ಎಂಬುವವರಿಗೆ ಸೇರಿದ 4 ಹಸುಗಳು ಸಾವನ್ನಪ್ಪಿವೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ವೇಳೆ ಚಿರತೆ ತಂತಿ ಬೇಲಿ ನೆಗೆದು ಒಳಬಂದು 4 ಹಸುಗಳ ಮೇಲೆ ದಾಳಿ ಮಾಡಿ ರಕ್ತ ಹೀರಿ ಕೊಂದಿದೆ. ಒಂದು ಹಸುವನ್ನು ಎಳೆದೊಯ್ಯಲು ಪ್ರಯತ್ನಿಸಿ ವಿಫಲಗೊಂಡು ತಂತಿ ಬೇಲಿ ಬದಿಯಲ್ಲೇ ಹಸುವಿನ ಮಾಂಸ ತಿಂದು ಪರಾರಿಯಾಗಿದೆ.
ಚಿರತೆ ದಾಳಿ ಹಿನ್ನೆಲೆ ರೈತರು ಬೆಚ್ಚಿಬಿದ್ದಿದ್ದು ಸ್ಥಳಕ್ಕೆ ಬಿಆರ್ ಟಿ ಡಿಸಿಎಫ್ ಶ್ರೀಪತಿ, ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಈ ವೇಳೆ ರೈತ ರಾಮಯ್ಯ ಮಾತನಾಡಿ, ತಮ್ಮ ಕುಟುಂಬ ನಿರ್ವಹಣೆಗೆ ಹೈನುಗಾರಿಕೆಯೇ ಆಧಾರವಾಗಿದ್ದು 5 ಹಸುಗಳಲ್ಲಿ ನಾಲ್ಕೂ ಹಸು ಮೃತಪಟ್ಟಿವೆ, ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಚಿರತೆ ಉಪಟಳವಿದ್ದು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದರೇ ಈ ಘಟನೆ ಆಗುತ್ತಿರಲಿಲ್ಲ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಕೂಡಲೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳಿ, ಅರಣ್ಯ ಇಲಾಖೆಯು ಗರಿಷ್ಠ ಪರಿಹಾರವನ್ನು ರೈತನಿಗೆ ಕೊಡಿ ಎಂದು ಸೂಚಿಸಿದರು.