ಕೆರೆಗಳಿಗೆ ತುರ್ತಾಗಿ ನೀರು ಹರಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ

| Published : Jul 11 2025, 01:47 AM IST

ಸಾರಾಂಶ

ತಾಲೂಕಿನ ಕೆರೆಗಳಿಗೆ ತುರ್ತಾಗಿ ನೀರು ತುಂಬಿಸಲು ತಾಲೂಕು ಆಡಳಿತ ಮುಂದಾಗದಿದ್ದಲ್ಲಿ ರೈತಸಂಘದ ವತಿಯಿಂದ ಗುಂಡ್ಲುಪೇಟೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕೆರೆಗಳಿಗೆ ತುರ್ತಾಗಿ ನೀರು ತುಂಬಿಸಲು ತಾಲೂಕು ಆಡಳಿತ ಮುಂದಾಗದಿದ್ದಲ್ಲಿ ರೈತಸಂಘದ ವತಿಯಿಂದ ಗುಂಡ್ಲುಪೇಟೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸಲು ಪ್ರಸಕ್ತ ಸಾಲಿನಲ್ಲಿ ೧೪ ಕೆರೆಗಳಿಗೆ ನೀರು ತುಂಬಿಸಿಲ್ಲ. ಸ್ಥಳೀಯ ಶಾಸಕರು ಹಾಗು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿದರು.

ನೆರೆಯ ತಮಿಳುನಾಡಿಗೆ ೫ ಸಾವಿರ ಕ್ಯೂಸೆಕ್ಸ್‌ ನೀರನ್ನು ಹರಿಸಲಾಗಿದೆ.ಆದರೆ ಜಿಲ್ಲೆಯ ಕೆರೆಗಳಿಗೆ ಕುಂಟು ನೆಪ ಹೇಳಿಕೊಂಡು ನೀರು ತುಂಬಿಸಲು ನಿರ್ಲಕ್ಷ್ಯ ಜಿಲ್ಲಾಡಳಿತ ವಹಿಸಿದೆ ಎಂದು ಗುಡುಗಿದರು.

ತಾಲೂಕಿನಲ್ಲಿ ವಿವಿಧ ಫಸಲುಗಳು ಕಟಾವಿಗೆ ಬಂದಿವೆ.ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸದಿದ್ದರೆ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್‌ ಗಳು ರೈತರು ಹಾಗು ಸಾರ್ವಜನಿಕರಿಂದ ಬಲವಂತವಾಗಿ ಸಾಲ ವಸೂಲು ಮಾಡಿದರೆ ಫೈನಾನ್ಸ್‌ ಕಚೇರಿಗೆ ದಿಗ್ಬಂದನ ಹಾಕಬೇಕಾಗುತ್ತದೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್‌, ಮುಖಂಡರಾದ ರೇವಣ್ಣ,ಶಿವಣ್ಣ,ಸಿದ್ದರಾಜು ಇದ್ದರು.