ಬಸ್ತಿ ವಾಮನ ಶೆಣೈ ಅವರ ೨ನೇ ವರ್ಷದ ಪುಣ್ಯ ಸ್ಮರಣೆ ನಡೆಯಿತು. ಸಂಗೀತ ಕಛೇರಿಯ ಮೂಲಕ ನುಡಿನಮನ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುವಿಶ್ವ ಕೊಂಕಣಿ ಸರದಾರ ದಿ. ಬಸ್ತಿ ವಾಮನ ಶೆಣೈ ಅವರ ದ್ವಿತೀಯ ವರ್ಷದ ಪುಣ್ಯತಿಥಿ ಅಂಗವಾಗಿ ನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ಅಂಕುಶ ನಾಯಕ್ (ಸಿತಾರ್) ಹಾಗೂ ಬಾಲಚಂದ್ರ ಪ್ರಭು (ಹಾಡುಗಾರಿಕೆ) ಅವರ ಸಂಗೀತ ಕಛೇರಿಯ ಮೂಲಕ ನುಡಿನಮನ ಸಲ್ಲಿಸಲಾಯಿತು. ರಾಜೇಶ್ ಭಾಗವತ (ತಬಲಾ), ಶ್ರೀದತ್ತ ಪ್ರಭು (ಫಕವಾಜ್) ಪ್ರಸಾದ್ ಕಾಮತ್ (ಹಾರ್ಮೋನಿಯಂ) ಸಹಕರಿಸಿದರು.ಇದೇ ಸಂದರ್ಭ ದಿ. ಬಸ್ತಿ ವಾಮನ ಶೆಣೈ ಅವರ ಪುತ್ಥಳಿಗೆ ಮಾಲಾರ್ಪಣೆ, ಪುಷ್ಪ ನಮನದ ಬಳಿಕ ನಡೆದ ನುಡಿನಮನದಲ್ಲಿ ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ, ಹಿರಿಯ ಲೆಕ್ಕಪರಿಶೋಧಕ ನಂದಗೋಪಾಲ ಶೆಣೈ ಅವರು ಕೊಂಕಣಿ ಅಭಿವೃದ್ಧಿಗಾಗಿ ಬಸ್ತಿ ಅವರ ಕೊಡುಗೆಯನ್ನು ಸ್ಮರಿಸಿದರು. ಹಿರಿಯ ಚಿಂತಕ ಪ್ರಭಾಕರ ಜೋಶಿ, ಡಾ ಕಸ್ತೂರಿ ಮೋಹನ್ ಪೈ, ಬಂಟವಾಳ ನಾರಾಯಣ ಕಾಮತ್, ಎಡ್ಡಿ ಸಿಕ್ವೆರಾ, ಗೀತಾ ಸಿ ಕಿಣಿ, ಜ್ಯುಲಿಯೆಟ್ ಮೊರಾಸ್, ಮುಂತಾದವರು ಬಸ್ತಿಯವರ ವಿಶಿಷ್ಟ ವ್ಯಕ್ತಿತ್ವ, ಮುಖಂಡತ್ವ, ಸಂಘಟನಾ ಸಾಮರ್ಥ್ಯ ಇತ್ಯಾದಿಗಳನ್ನು ಗುರುತಿಸಿ ನಮನ ಅರ್ಪಿಸಿದರು.ಕಾರ್ಯದರ್ಶಿ ಸಿಎ ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಖಜಾಂಚಿ ಬಿ.ಆರ್. ಭಟ್, ಟ್ರಸ್ಟಿಗಳಾದ ವಿಲಿಯಂ ಡಿಸೋಜ, ರಮೇಶ ನಾಯಕ್ ಮತ್ತು ವಾಲ್ಟರ್ ಡಿಸೋಜ, ಪಯನ್ನೂರ ರಮೇಶ್ ಪೈ ಹಾಗೂ ಸಂಶೋಧನಾ ನಿರ್ದೇಶಕ ಡಾ.ಬಿ. ದೇವದಾಸ ಪೈ ಮತ್ತಿತರರು ಇದ್ದರು.ಟ್ರಸ್ಟಿ ಶಕುಂತಲಾ ಆರ್. ಕಿಣಿ ಹಾಗೂ ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ಸಂಯೋಜಿಸಿದ್ದರು. ಡಾ. ವೈಷ್ಣವಿ ಕಿಣಿ ಅವರು ಬಸ್ತಿ ವಾಮನ ಶೆಣೈ ಅಭಿಮಾನ ಗೀತೆ ಹಾಡಿದರು.