ಆಧ್ಯಾತ್ಮಿಕ ಗ್ರಂಥಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಮಟಾಗ್ರಾಮೀಣ ಪ್ರದೇಶದಲ್ಲಿ ಆಧ್ಯಾತ್ಮ ಕೇಂದ್ರೀಕೃತ ಗ್ರಂಥಾಲಯವೊಂದನ್ನು ಸಜ್ಜುಗೊಳಿಸಿ ಲೋಕಕ್ಕೆ ನೀಡಿರುವುದು ಅತ್ಯುತ್ತಮ ಕಾರ್ಯ. ಇಂತಹ ಸದಭಿರುಚಿಯ ಚಟುವಟಿಕೆಗಳನ್ನು ನಿರಂತರ ನಡೆಸುತ್ತಿರುವ ಕತಗಾಲದ ಕಲಾಶ್ರೀ ಸಂಸ್ಥೆ ಮಾದರಿಯಾಗಿದೆ ಎಂದು ಧರ್ಮಜಾಗೃತಿ ವಿಭಾಗದ ಹೊನ್ನಾವರ ಮಂಡಲದ ಮುಖ್ಯಸ್ಥ ಮಂಜುನಾಥ ಆಚಾರಿ ಹೇಳಿದರು.

ಕತಗಾಲದ ಸಾಂತೂರಿನ ವರ ರುಚಿಸದನಂದಲ್ಲಿ ಇತ್ತೀಚೆಗೆ ಸ್ಥಳೀಯ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯಿಂದ ಡಾ.ಗಣಪತಿ ಭಟ್ಟ ಪರಿಕಲ್ಪನೆಯಲ್ಲಿ ಸಂಯೋಜಿಸಿದ ಆಧ್ಯಾತ್ಮಿಕ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿ ಕಾರವಾರದ ಉದಯ ಶೆಟ್ಟಿ, ಹಿಂದಿ ಆವೃತ್ತಿಯ ಸತ್ಯನಾರಾಯಣಂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಪೂಜೆಗೆ ಸೀಮಿತವಾಗಿದ್ದ ಸತ್ಯನಾರಾಯಣ ಪುಸ್ತಕವನ್ನು ರಾಗಸಂಯೋಜನೆ, ಸಂಸ್ಕೃತ ಭಾಷಾ ಕಲಿಕೆಗೆ ಪೂರಕವಾಗುವಂತೆ ಪರಿವರ್ತಿಸಿ, ಪದಚ್ಛೇದ-ಅನ್ವಯಾರ್ಥದೊಂದಿಗೆ ರಚಿಸಿರುವುದು ವಿಶೇಷ ಎಂದರು. ಅತಿಥಿ ತಿಳುವಳ್ಳಿ ಗೋಶಾಲೆಯ ವ್ಯವಸ್ಥಾಪಕ ಪರಶುರಾಮ ಜಾಧವ ಮಾತನಾಡಿ, ಗೋವಿನ ಆಲಿಂಗನದಿಂದ ನಕಾರಾತ್ಮಕ ಚಿಂತನೆ ದೂರವಾಗಿ ನಮ್ಮಲ್ಲಿ ವಿಶಿಷ್ಟ ಶಕ್ತಿ ಸಂಚಯನವಾಗುತ್ತದೆ. ಸ್ವದೇಶಿ ಗೋಶಾಲೆಗಳು ಹೆಚ್ಚಲಿ ಎಂದರು.ವೇ.ಮೂ ಶಂಕರ ಭಟ್ಟ ಜೋಶಿ ಹಾನಗಲ, ಗೋದಾನದ ಮಹತ್ವ ವಿವರಿಸಿದರೆ, ಸಾಮಾಜಿಕ ಕಾರ್ಯಕರ್ತ ಜಿ.ಜಿ. ಹೆಗಡೆ ಬೆಳ್ಳೆ ಪರಿಸರದ ಮಹತ್ವ ತಿಳಿಸಿದರು. ಸುಜಾತಾ ಕುಲಕರ್ಣಿ ನೈಮಿಷಾರಣ್ಯ ಪ್ರವಾಸದ ಅನುಭವ ಹಂಚಿಕೊಂಡರು. ಗೋದಾನಿ ರುಕ್ಮಿಣಿ ದೀಕ್ಷಿತ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಗೋಪಾಲಕರಾದ ರಾಧಾ-ಪರಶುರಾಮ ಜಾಧವ ಮತ್ತು ಅಂಕೋಲಾದ ಭಾಗೀರಥಿ-ವಸಂತ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಲಾಯಿತು.ಗೋವಾದ ವೀಣಾ ಗುರುನಾಥ ಲಿಮೈ ದಂಪತಿಗಳು ನೈಮಿಷಾರಣ್ಯ ತೀರ್ಥ ಸಮಾರಾಧನೆಯ ಯಜಮಾನತ್ವ ವಹಿಸಿದ್ದರು. ಮಹಿಳೆಯರು ವಿವಿಧ ರಾಗಗಳಲ್ಲಿ ಸ್ತೋತ್ರ ಪಠಿಸಿದರು. ಧಾರವಾಡದ ಪ್ರಶಾಂತ ದೀಕ್ಷಿತ ಸ್ವಾಗತಿಸಿದರು. ಡಾ. ಗಣಪತಿ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ಅಂಬಿಗ ವಂದಿಸಿದರು. ಯುವವಿಜ್ಞಾನಿ ಡಾ. ವೈ.ಆರ್. ಕಾರ್ತಿಕ ಕಾರ್ಯಕ್ರಮ ನಿರ್ವಹಿಸಿದರು. ಗಿರಿಜಮ್ಮ ಕಲ್ಲೂರು, ಪಕೀರೇಶ ಗಿರಿಯಪ್ಪನವರ, ಸಂಗೀತ ಪಾಟೀಲ, ಪ್ರಭಾವತಿ ಹೆಗಡೆ, ಬಿ.ಜಿ. ಗುಣಿ, ಹೇಮಾ ಜೋಶಿ, ರಾಧಾ ಕುಲಕರ್ಣಿ, ನಾರಾಯಣ ಜೋಶಿ, ಶಿವರಾಮ ಭಟ್ಟ, ಶ್ರೀಧರ ಶಾಸ್ತ್ರಿ ಮುಂತಾದವರಿದ್ದರು.