ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶೈಕ್ಷಣಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಯಲು ಇಂತಹ ಮಕ್ಕಳ ಸಂತೆಯು ಪ್ರಮುಖ ವೇದಿಕೆಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ರಾಣಿ ಹೇಳಿದರು.ಪಟ್ಟಣದ ಶಾಲಿನಿ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಬದುಕಲು ಸಾಮಾನ್ಯ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನವು ಅಗತ್ಯ ಎಂದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್‌ ಮಾತನಾಡಿ, ಶಿಕ್ಷಣದ ಜೊತೆಗೆ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕವಾದ ಪಠ್ಯೇತರ ಚಟುವಟಿಕೆಗಳನ್ನು ಕಲ್ಪಿಸುವುದು ಶಾಲೆಗಳ ಜವಾಬ್ದಾರಿಯಾಗಿದೆ. ನಾಗಲೋಟದಲ್ಲಿ ಓಡುತ್ತಿರುವ ಅತ್ಯಾಧುನಿಕ ಜಗತ್ತಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಬದುಕಬೇಕೆಂದರೆ ಶಿಕ್ಷಣದ ಜೊತೆಗೆ ವ್ಯವಹಾರ ಜ್ಞಾನವು ಮುಖ್ಯವಾಗಲಿದೆ ಎಂದರು. ಶಾಲೆಯಲ್ಲಿ ಸಿಗುವ ಶಿಕ್ಷಣದ ಜೊತೆಗೆ ಮನೆಗಳಲ್ಲಿ ಪಾಲಕರ ನಡೆನುಡಿ ಹಾಗೂ ಸಂಸ್ಕಾರವೂ ಸಹ ಮಕ್ಕಳ ಬದುಕಿನ ದಾರಿ ದೀಪವಾಗಲಿದೆ. ಪಾಲಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ಗಮನ ಹರಿಸುವುದು ಒಳ್ಳೆಯದು. ಇದರಿಂದ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗಲಿದೆ ಎಂದು ಪಾಲಕರಿಗೆ ಸಲಹೆ ನೀಡಿದರು.ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶಾಲೆ ವತಿಯಿಂದ ಅಭಿನಂದಿಸಲಾಯಿತು. ಮಕ್ಕಳ ಸಂತೆ ಹಾಗೂ ಆಹಾರ ಮೇಳದಲ್ಲಿ ಎಲ್ಲಾ ರೀತಿಯ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು. ಜೊತೆಗೆ ಪಾನಿಪುರಿ, ವಡಾಪಾವ್, ಬಜ್ಜಿ, ಸಮೋಸ, ಗೀರೈಸ್, ಬಿರಿಯಾನಿ, ಅಕ್ಕಿ ರೊಟ್ಟಿ, ಎಣ್ಣೆ ಬದನೆಕಾಯಿ, ರವೆ ಉಂಡೆ, ಜಾಮೂನು ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳು ವ್ಯಾಪಾರ ಮಾಡಿದ್ದು ಗ್ರಾಹಕರು ಖರೀದಿಸಿ ಪ್ರೋತ್ಸಾಹ ನೀಡಿದರು. ಸಂಸ್ಥೆಯ ಸಂಸ್ಥಾಪಕರಾದ ಸಿ.ಎನ್. ನಂಜುಂಡೇಗೌಡ, ಪುರಸಭೆ ಮಾಜಿ ಉಪಾಧ್ಯಕ್ಷೆ ರಾಣಿಕೃಷ್ಣ, ಕುವೆಂಪು ವೇದಿಕೆ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಸಮಾಜ ಸೇವಕರಾದ ವಡ್ಡರಹಳ್ಳಿ ಗಣೇಶ್, ಚಿಕ್ಕಬಿಳ್ತಿ ಗಂಗಾಧರ್‌, ಶಿಕ್ಷಕ ವೃಂದ, ಪಾಲಕರು ಹಾಗೂ ಇತರರು ಇದ್ದರು.