ಸಾರಾಂಶ
ಚಾಲಕನ ಸಮಯಪ್ರಜ್ಞೆಯಿಂದ 30ಕ್ಕೂ ಅಧಿಕ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮಲಗಿದ್ದ ಪ್ರಯಾಣಿಕರನ್ನು ಎಬ್ಬಿಸಿ ಕೆಳಗೆ ಇಳಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ. ನಂತರ ಬಸ್ಸು ಬೆಂಕಿಗು ಸುಟ್ಟು ಕರಕಲಾಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ನ ಟೈರ್ ಬ್ಲಾಸ್ಟ್ ಆಗಿ ಹೊತ್ತಿಕೊಂಡ ಬೆಂಕಿಯಿಂದ ಬಸ್ ಸಂಪೂರ್ಣ ಭಸ್ಮವಾದ ಘಟನೆ ನಗರದ ಹೊರವಲಯದ ಮನಗೂಳಿ ಬಳಿ ಹಿಟ್ಟನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಅದೃಷ್ಟವಶಾತ್ ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಒಟ್ಟು 36 ಜನ ಪ್ರಯಾಣಿಕರಿದ್ದ ಜನತಾ ಟ್ರಾವೆಲ್ಸ್ಗೆ ಸೇರಿದ ಬಸ್ ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿತ್ತು. ಈ ವೇಳೆ ಟೈರ್ ಬ್ಲಾಸ್ಟ್ ಆಗಿದೆ. ಬಸ್ಸಿನ ಎಡಬದಿಯ ಹಿಂಭಾಗದ ಟೈರ್ ಬ್ಲಾಸ್ಟ್ ಆಗಿದ್ದರಿಂದ ಚಕ್ರದ ಕಬ್ಬಿಣದ ಭಾಗ ರಸ್ತೆಗೆ ತಗುಲಿ ಘರ್ಷಣೆ ಉಂಟಾಗಿ ಕಿಡಿ ಹೊತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ಟೈರ್ಗೆ ವ್ಯಾಪಿಸಿದೆ. ಬಳಿಕ ಬಸ್ಗೂ ಬೆಂಕಿ ತಗುಲಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ.
ಪ್ರಾಣ ಕಾಪಾಡಿದ ಚಾಲಕ:ಚಾಲಕ ಫಾಲಾಕ್ಷಪ್ಪ ಅವರು ಟೈರ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನು ಎಚ್ಚರಿಸಿ, ತಕ್ಷಣವೇ ಬಸ್ ಬಿಟ್ಟು ಕೆಳಗೆ ಇಳಿಯಲು ಸೂಚನೆ ನೀಡಿದ್ದಾರೆ. ಆಗ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ತಮ್ಮ ಲಗೇಜ್ ಸಮೇತ ಸುರಕ್ಷಿತವಾಗಿ ಕೆಳಗೆ ಇಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ಗೆ ಬೆಂಕಿ ಹೊತ್ತಿಕೊಂಡ ಆರಂಭಿಕ ಹಂತದಲ್ಲಿ ಬೆಂಕಿನಂದಿಸಲು ಬಸ್ಸಿನ ಚಾಲಕ, ಕ್ಲೀನರ್, ಪ್ರಯಾಣಿಕರು ಮತ್ತು ದಾರಿಹೋಕರು, ಸ್ಥಳೀಯರು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಬೆಂಕಿಯ ಕೆನ್ನಾಲಿಗೆ ಬಸ್ ವ್ಯಾಪಿಸಿಕೊಂಡು, ಡಿಸೇಲ್ ಟ್ಯಾಂಕ್ ಸ್ಫೋಟಿಸಿ ಕ್ಷಣಾರ್ಧದಲ್ಲೇ ಬಸ್ ಸುಟ್ಟು ಕರಕಲಾಗಿದೆ.