ಸಾರಾಂಶ
ಪ್ಯಾಲೆಸ್ಟೇನ್ ಪರ ದೇಣಿಗೆ ನೀಡುವಂತೆ ಪ್ರಚೋದನಾಕಾರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ. ನಗರದ ನಿವಾಸಿ, ಮೊಹಮ್ಮದ್ ಆಲಿ ಶೋಯಬ್ ಬಂಧಿತ ಆರೋಪಿ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ಯಾಲೆಸ್ಟೇನ್ ಪರ ದೇಣಿಗೆ ನೀಡುವಂತೆ ಪ್ರಚೋದನಾಕಾರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.ನಗರದ ನಿವಾಸಿ, ಮೊಹಮ್ಮದ್ ಆಲಿ ಶೋಯಬ್ ಬಂಧಿತ ಆರೋಪಿ. ಮುಸ್ಲಿಮರನ್ನು ಉತ್ತೇಜಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವಂತಹ ವದಂತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿ, ಕಾನೂನು ಸುವ್ಯವಸ್ಥೆ ಹಾಳುಗೆಡವುವ ಸಂಭವ ಇದ್ದುದರಿಂದ ಆತನ ವಿರುದ್ಧ ಗುನ್ನೆ 505(2) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಏ.12ರಂದು ಮೊಹಮ್ಮದ್ ಆಲಿ ಶೋಯಬ್ ವಾಟ್ಸಪ್ನಲ್ಲಿ ವೀಡಿಯೋ ಹರಿಬಿಟ್ಟಿದ್ದ ವಿಡಿಯೋದಲ್ಲಿ ಹೀಗಂತ ಕರೆ ನೀಡಿದ್ದ; "ನಮ್ಮ ದೇದಹ ಯಾವುದೇ ಒಂದು ಭಾಗಕ್ಕೆ ನೋವುಂಟಾದರೆ ಇಡೀ ದೇಹ ಅದರ ನೋವನ್ನು ಅನುಭವಿಸುತ್ತದೆ. ಅದೇ ರೀತಿ ನಮ್ಮ ಕೋಮಿನ ಜನರು ವಾಸಿಸುವ ಪ್ಯಾಲೇಸ್ಟೀನ್ನಲ್ಲಿ ತುಂಬ ಜನ ನೋವಿನಲ್ಲಿದ್ದಾರೆ. ಅಕ್ಸಾ ಮಸೀದಿ ವಿಶ್ವದ 2ನೇ ಪ್ರಸಿದ್ಧ ಮಸೀದಿಯಾಗಿದೆ. ಪ್ಯಾಲೇಸ್ಟೀನ್ನ ಮಸೀದಿ ಉಳಿಸುವುದು ಎಲ್ಲ ಮುಸ್ಲಿಮರ ಜವಾಬ್ದಾರಿ ಆಗಿದೆ. ಪ್ರಪಂಚದ ಕೆಲವು ಕೋಮಿನ ಜನರು ಪ್ಯಾಲೇಸ್ಟೀನರ ಮೇಲೆ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಅಲ್ಲಿನ ಜನರಿಗೆ, ಮಕ್ಕಳಿಗೆ ಒಂದು ಹೊತ್ತಿನ ಊಟ ಸಿಗುತ್ತಿಲ್ಲ. ಅಂಥವರಿಗೆ ನಾವು ಧನಸಹಾಯ ಮಾಡಬೇಕು. ಡೊನೇಷನ್ ಕಳಿಸಬೇಕು " ಎಂದು ವೀಡಿಯೋದಲ್ಲಿ ಕರೆ ನೀಡಿದ್ದ ಎಂದು ಇಲಾಖೆ ತಿಳಿಸಿದೆ.