ಸಾರಾಂಶ
ಮನೆಯಿಂದ ತನ್ನ ಕಾರಿನಲ್ಲಿ ಮಣ್ಣು ತಂದು ಅದನ್ನು ಗುಂಡಿಗೆ ಸುರಿದು ಗುಂಡಿಯನ್ನು ತಾತ್ಕಾಲಿಕ ಮುಚ್ಚಿದ್ದಾರೆ. ಇವರ ಈ ಕಾರ್ಯವನ್ನು ಯಾರೋ ವಿಡಿಯೋ ಮಾಡಿದ್ದು ಬಳಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹಿರಿಯ ನಾಗರಿಕರ ಗುಂಡಿ ಮುಚ್ಚುವ ಪಾಠ ಈಗ ವೈರಲ್ ಆಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಸ್ತೆಯಲ್ಲಿನ ಹೊಂಡವನ್ನು ನೋಡಿ ಸಹಿಸಲಾಗದೆ ಹಿರಿಯ ನಾಗರಿಕರೊಬ್ಬರು ತಾವೇ ಸ್ವತಃ ಮಣ್ಣು ತಂದು ಗುಂಡಿಗೆ ಸುರಿದಿದ್ದಾರೆ.ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನಂತೂರಿನಲ್ಲಿ ಬುಧವಾರ ರಾತ್ರಿ ಈ ವಿದ್ಯಮಾನ ನಡೆದಿದೆ.
ಕದ್ರಿಯಲ್ಲಿ ಅಂಗಡಿ ಹೊಂದಿರುವ ಪಾಂಡುರಂಗ ಕಾಮತ್ ಎಂಬವರು ನಿತ್ಯವೂ ದ್ವಿಚಕ್ರ ವಾಹನದಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಪ್ರತಿ ಬಾರಿಯೂ ಘನ ವಾಹನಗಳ ಸಂಚಾರದ ಒತ್ತಡದ ನಡುವೆ ಇವರು ಕೂಡ ಸಾಗಬೇಕು. ಆ ವೇಳೆ ರಸ್ತೆಯಲ್ಲಿನ ಗುಂಡಿಗೆ ದ್ವಿಚಕ್ರ ವಾಹನವನ್ನು ಇಳಿಸಿ ಹತ್ತಿಸಬೇಕು. ಇದು ತನ್ನಂತಹ ವಯಸ್ಕರಿಗೆ ಬಹಳ ಕಷ್ಟದ ಕೆಲಸ. ಈ ಗುಂಡಿಯನ್ನು ಮುಚ್ಚಲು ಯಾರೂ ಕ್ರಮ ಕೈಗೊಳ್ಳದ ಕಾರಣ ನಾನೇ ಮನೆಯಿಂದ ಮಣ್ಣು ತಂದು ಗುಂಡಿಗೆ ಸುರಿದಿದ್ದೇನೆ ಎನ್ನುತ್ತಾರೆ ಅವರು. ಮನೆಯಿಂದ ತನ್ನ ಕಾರಿನಲ್ಲಿ ಮಣ್ಣು ತಂದು ಅದನ್ನು ಗುಂಡಿಗೆ ಸುರಿದು ಗುಂಡಿಯನ್ನು ತಾತ್ಕಾಲಿಕ ಮುಚ್ಚಿದ್ದಾರೆ. ಇವರ ಈ ಕಾರ್ಯವನ್ನು ಯಾರೋ ವಿಡಿಯೋ ಮಾಡಿದ್ದು ಬಳಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ಹಿರಿಯ ನಾಗರಿಕರ ಗುಂಡಿ ಮುಚ್ಚುವ ಪಾಠ ಈಗ ವೈರಲ್ ಆಗುತ್ತಿದೆ.