ಸಾರಾಂಶ
ಮಂಡ್ಯ : ಆಸ್ತಿಗಾಗಿ ತಂದೆ, ತಾಯಿ ಎಂಬುದನ್ನೂ ನೋಡದೆ ಕೈಕಾಲು ಮುರಿದ ದ್ವಿತೀಯ ಪುತ್ರ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದು, ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಪೋಷಕ ಜವರೇಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಗ ನೀಲೇಗೌಡ ಹಾಗೂ ಆತನ ಪತ್ನಿ ಕೀರ್ತಿ ಎಂಬುವವರು ತಮಗೆ ಆಸ್ತಿ ಪಾಲಾಗಿ ಬಂದ ನಂತರವೂ ಜೀವನ ನಿರ್ವಹಣೆಗೆ ಉಳಿಸಿಕೊಂಡ ಆಸ್ತಿಯೂ ತಮಗೇ ಬೇಕೆಂದು ಕಿರುಕುಳ ನೀಡುತ್ತಿದ್ದರು. ನವೆಂಬರ್ ತಿಂಗಳ ೧೭ರಂದು ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂದರು.
ಹಲ್ಲೆಯಿಂದ ನನಗೆ ಕೈ ಮುರಿದಿದ್ದು, ತೀವ್ರ ತರನಾದ ಗಾಯಗಳಾಗಿವೆ, ಪತ್ನಿ ಭಾಗ್ಯಮ್ಮಗೆ ಕಾಲು ಮುರಿದಿದ್ದು, ಎದ್ದು ಓಡಾಡದ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ದೂರನ್ನು ಬದಲಿಸಿ ಕೊಡುವಂತೆ ಒತ್ತಡ ಹೇರಿ ಅನ್ಯಾಯ ಎಸಗಲಾಗುತ್ತಿದೆ ಎಂದು ಹೇಳಿದರು.
ಹಲ್ಲೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೆ, ಪೊಲೀಸರು ದೂರಿನಲ್ಲಿ ಮಾರಣಾಂತಿಕ ಹಲ್ಲೆ ಎಂಬುದನ್ನು ಬದಲಿಸಿ, ನೀಲೇಗೌಡನ ಮಾವ ಮತ್ತಿತರರ ಹೆಸರನ್ನು ತೆಗೆದು ದೂರು ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಪ್ರಕರಣ ಸಂಬಂಧ ನ್ಯಾಯ ಒದಗಿಸಬೇಕೆಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಲ್ಲಿ ಮನವಿ ಮಾಡಿದ್ದು, ನ್ಯಾಯ ಒದಗಿಸಲಾಗದಿದ್ದರೆ ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದರು.
ಗೋಷ್ಠಿಯಲ್ಲಿ ಪುತ್ರಿ ವರಲಕ್ಷ್ಮೀ, ವಕೀಲೆ ಸಲ್ಮಾ ಇತರರು ಇದ್ದರು.