ಸಾರಾಂಶ
ಕನ್ನಡಪ್ರಭ ವಾರ್ತೆ ಮ೦ಗಳೂರು
ವಿದ್ಯುತ್ ಪೂರೈಕೆಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ಧವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿದ್ಯಚ್ಛಕ್ತಿ ಸಬರಾಜು ಕಂಪೆನಿ (ಮೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ತಿಳಿಸಿದ್ದಾರೆ.ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳಿಗೆ ಒಟ್ಟು 800 ಮ೦ದಿಯನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಒಟ್ಟು 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾರ್ಗದಲ್ಲಿ ಅಪಾಯ, ಅವಘಡಗಳಾದರೆ ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾ೦ ಸಹಾಯವಾಣಿ 1912 ಕೂಡ ಸ೦ಪರ್ಕಿಸಬಹುದಾಗಿದೆ ಎ೦ದು ತಿಳಿಸಿದ್ದಾರೆ.ವಿದ್ಯುತ್ ಸ೦ಪರ್ಕ ಹಾಗೂ ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮ ವಹಿಸುವ೦ತೆ ಮೆಸ್ಕಾಂನ ಎಲ್ಲ ಮುಖ್ಯ ಎಂಜಿನಿಯರ್ (ವಿ), ಅಧೀಕ್ಷಕ ಎಂಜಿನಿಯರ್ಗಳು, ಕಾರ್ಯ ನಿರ್ವಾಹಕ ಎಂಜಿನಿಯರ್ಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ /ಕೊಂಬೆಗಳನ್ನು ಕತ್ತರಿಸುವ ಕೆಲಸ ಈಗಾಗಲೇ ಮಾಡಲಾಗಿದೆ. ಮಳೆಗಾಲದ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್ ಕ೦ಬಗಳು, ತ೦ತಿಗಳು, ಪರಿವರ್ತಕಗಳು ಸೇರಿದ೦ತೆ ಸಲಕರಣೆಗಳನ್ನು ಮೆಸ್ಕಾ೦ನ ಎಲ್ಲ ವಿಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ.
ವಿಶೇಷ ಕಾರ್ಯಪಡೆ ಹಾಗೂ ವಾಹನಗಳು:ದ.ಕ. ಜಿಲ್ಲೆಗೆ ಸ೦ಬಂಧಿಸಿದಂತೆ, ಅತ್ತಾವರ- 40 ಮ೦ದಿಯ ಕಾರ್ಯಪಡೆ, 4 ವಾಹನಗಳು; ಕಾವೂರು- 71 ಮ೦ದಿಯ ಕಾರ್ಯಪಡೆ, 6 ವಾಹನಗಳು; ಪುತ್ತೂರು- 95 ಮ೦ದಿಯ ಕಾರ್ಯಪಡೆ, 5 ವಾಹನಗಳು; ಬಂಟ್ವಾಳ- 113 ಮ೦ದಿಯ ಕಾರ್ಯಪಡೆ, 6 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಉಡುಪಿ ಜಿಲ್ಲೆಗೆ ಸ೦ಬಂಧಿಸಿ ಉಡುಪಿ- 65 ಮ೦ದಿಯ ಕಾರ್ಯಪಡೆ, 5 ವಾಹನಗಳು; ಕಾರ್ಕಳ- 48 ಮ೦ದಿಯ ಕಾರ್ಯಪಡೆ, 4 ವಾಹನಗಳು; ಕುಂದಾಪುರ- 76 ಮ೦ದಿಯ ಕಾರ್ಯಪಡೆ, 2 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾ೦ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಕ೦ಬಗಳು, ತ೦ತಿಗಳು, ಪರಿವರ್ತಕಗಳು ಸೇರಿದ೦ತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸ೦ಭವಿಸಿದ್ದು, ಇವುಗಳನ್ನು ಸರಿಪಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಇದರ ಜತೆಗೆ ಮುಂಗಾರು ಅವಧಿಯ ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ಹೇಳಿದ್ದಾರೆ.ಜೂ.3ರ ವರೆಗೂ ಹಗುರ ಮಳೆ ಮುನ್ಸೂಚನೆಮಂಗಳೂರು: ಕರಾವಳಿಗೆ ಮುಂಗಾರು ಪ್ರವೇಶಕ್ಕೆ ಕೆಲವೇ ದಿನಗಳಿದ್ದು, ಮಂಗಳವಾರ ಮಳೆಯ ವಾತಾವರಣ ಸೃಷ್ಟಿಯಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶದ ನಿರೀಕ್ಷೆಯನ್ನು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ ಆರು ದಿನಗಳ ಕಾಲ ಅಂದರೆ ಮೇ 29 ರಿಂದ ಜೂ.3ರ ವರೆಗೆ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.ದ.ಕ.ಜಿಲ್ಲೆಯಲ್ಲಿ ಮಂಗಳವಾರ ದಿನಪೂರ್ತಿ ಮೋಡ ಕವಿದ ವಾತಾವರಣ ಇದ್ದು, ತಂಪಾದ ವಾತಾವರಣ ಕಂಡುಬಂದಿದೆ. ಮಧ್ಯಾಹ್ನ ಮಂಗಳೂರು ಸೇರಿದಂತೆ ಗ್ರಾಮೀಣ ಭಾಗದ ಅಲ್ಲಲ್ಲಿ ಸಣ್ಣ ಮಳೆಯಾಗಿದೆ. ಇಡೀ ದಿನ ಮಳೆಗಾಲದ ವಾತಾವರಣ ಕಂಡುಬಂದಿದ್ದು, ಸಂಜೆಯೂ ಇದೇ ವಾತಾವರಣ ಮುಂದುವರಿದಿತ್ತು.ಮಂಗಳೂರು, ಉಳ್ಳಾಲದಲ್ಲಿ ಗರಿಷ್ಠ ಮಳೆ:
ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನ ವರೆಗೆ ಮಂಗಳೂರು ಹಾಗೂ ಉಳ್ಳಾಲದಲ್ಲಿ ತಲಾ 16.4 ಮಿಲಿ ಮೀಟರ್ ಗರಿಷ್ಠ ಮಳೆ ದಾಖಲಾಗಿದೆ.ಬೆಳ್ತಂಗಡಿ 7.8 ಮಿ.ಮೀ, ಬಂಟ್ವಾಳ 15.5 ಮಿ.ಮೀ, ಪುತ್ತೂರು 10.8 ಮಿ.ಮೀ, ಸುಳ್ಯ 11.4 ಮಿ.ಮೀ, ಮೂಡುಬಿದಿರೆ 12.2 ಮಿ.ಮೀ, ಕಡಬ 9.7 ಮಿ.ಮೀ, ಮೂಲ್ಕಿ 16.4 ಮಿ.ಮೀ. ಹಾಗೂ ಉಳ್ಳಾಲ 12.4 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 10.9 ಮಿ.ಮೀ. ದಾಖಲಾಗಿದೆ.--------------