ಸಾರಾಂಶ
ಎರಡನೇ ಮದುವೆಗೆ ಸಿದ್ಧವಾಗಿದ್ದ ಪತಿರಾಯ । ಚಪ್ಪಲಿ ಹಿಡಿದೇ ಹಿಗ್ಗಾ ಮುಗ್ಗ ಚಚ್ಚಿದ ಪತ್ನಿ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪತ್ನಿಗೆ ಮರೆಮಾಚಿ ಎರಡನೇ ಮದುವೆಗೆ ಸಿದ್ಧವಾಗಿದ್ದ ಪತಿರಾಯ ಸಖತ್ ಗೂಸಾ ತಿಂದ ಘಟನೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮುಂಜಾನೆ ನಡೆದಿದೆ.ಎರಡನೇ ಮದುವೆಯಾಗಲು ಮುಂದಾಗಿದ್ದವಗೆ ಮೊದಲ ಪತ್ನಿ ಚಪ್ಲಲಿಯಿಂದ ಹಿಗ್ಗಾ ಮುಗ್ಗ ಚಚ್ಚಿ ಆಕ್ರೋಶ ಹೊರ ಹಾಕಿದ್ದಾಳೆ. ಮದುವೆ ಮಂಟದಲ್ಲಿಯೇ ಇಂತಹದ್ದೊಂದು ಘಟನೆ ನಡೆದಿದ್ದು ಇನ್ನೇನು ತಾಳಿಕಟ್ಟಬೇಕು ಎನ್ನುವಷ್ಟರಲ್ಲಿ ಇಡೀ ಚಿತ್ರಣವೇ ಬದಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ, ನಾಲ್ಕು ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳ ಗ್ರಾಮದ ತನುಜ ಎಂಬುವರ ಮದುವೆಯಾಗಿದ್ದ. ಮದುವೆಯಾಗಿರುವ ವಿಷಯವನ್ನು ಮರೆಮಾಚಿ ವರದಕ್ಷಿಣೆ ದುರಾಸೆಗೆ ಮತ್ತೊಂದು ಮದುವೆಗೆ ಮುಂದಾಗಿದ್ದಾನೆ.ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಗೆ ಕಾರ್ತಿಕನಾಯ್ಕ ಸಜ್ಜಾಗಿರುವ ವಿಷಯ ತಿಳಿದು ತಮ್ಮ ಬಂಧು ಬಳಗದೊಂದಿಗೆ ಭಾನುವಾರ ಮುಂಜಾನೆ ನೇರವಾಗಿ ಚಿತ್ರದುರ್ಗಕ್ಕೆ ಬಂದಿದ್ದಾರೆ. ಎರಡನೇ ಮದುವೆ ಹೊಂಗನಸಿನಲ್ಲಿ ಕುಳಿತಿದ್ದವ ಮೇಲೆ ಕೈಯಲ್ಲಿ ಚಪ್ಪಲಿ ಹಿಡಿದೇ ಮೇಲೆರಗಿದ್ದಾಳೆ. ಸಿಟ್ಟು ಇಳಿಯುವ ತನಕ ಚಚ್ಚಿದ್ದಾಳೆ. ಈ ದೃಶ್ಯ ಕಂಡ 2ನೇ ವಧು ಮತ್ತು ಕುಟುಂಬಸ್ಥರು ಕಕ್ಕಾ ಬಿಕ್ಕಿಯಾಗಿದ್ದಾರೆ. ನಂತರದಲ್ಲಿ ಮದುವೆಗೆ ಬಂದವರಿಂದಲೇ ಕಾರ್ತಿಕ್ ನಾಯ್ಕಗೆ ಹೆಚ್ಚುವರಿ ಗೂಸಾ ಬಿದ್ದಿದೆ. ಹೊಡೆತ ತಿಂದ ಬಳಿಕ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.