ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ಅಡ್ಜಸ್ಟ್ಮೆಂಟ್ಗೆ ಒಳಗಾಗದ ನಾಲ್ವರನ್ನು ಟಾರ್ಗೆಟ್ ಮಾಡಲಾಗಿದೆ. ನಾನು, ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ, ಪ್ರಮೋದ ಮುತಾಲಿಕ್, ಪ್ರತಾಪ್ ಸಿಂಹ. ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಸಿ.ಟಿ.ರವಿಗೆ ಬೆದರಿಕೆ ಪತ್ರ ವಿಚಾರದ ಬಗ್ಗೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ್ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಮುಗಿಸಬೇಕೆಂಬ ಷಡ್ಯಂತ್ರ ಅಡಗಿದೆ. ರಾಜ್ಯದಲ್ಲಿ ಜನಪ್ರತಿನಿಧಿಗೆ ಭದ್ರತೆ ಇಲ್ಲ. ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಸುವರ್ಣಸೌಧದಲ್ಲಿ ಗೂಂಡಾಗಳು ಹೊಕ್ಕರು, ಅವರ ಹೆಸರು ಕೇಳಿದ್ದೀರಿ ಏನೇನು ಇದಾವೆ ಅಂತಾ. ಸುವರ್ಣಸೌಧದಲ್ಲಿ ಇಷ್ಟೊಂದು ಭದ್ರತೆ ಇದ್ದಾಗಲೇ ಒಳಗಡೆ ಬಂದರು. ಕಾನೂನು ಸುವ್ಯವಸ್ಥೆ ಎಲ್ಲಿದೆ? ಯಾವ ಅಧಿಕಾರಗಳನ್ನು ಸಸ್ಪೆಂಡ್ ಮಾಡಿದ್ದೀರಿ? ಅವರನ್ನ ಒಳಗೆ ಹೇಗೆ ಬಿಟ್ರೀ? ಸಿ.ಟಿ.ರವಿಯನ್ನು ಯಾವಾಗ ಬಂಧಿಸಿದರು ಎಂದು ಗೃಹ ಸಚಿವರಿಗೆ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಗೊತ್ತಿರಲಿಲ್ಲ ಎಂದರು.
ಬಿಜೆಪಿ ಮಾಜಿ ಶಾಸಕರ ಸಭೆ ವಿಚಾರ:ಶುಕ್ರವಾರ ನನಗೆ 17 ಜನ ಕರೆ ಮಾಡಿದ್ದರು, ನಾವು ಯಾರೂ ಆತ್ಮಸಾಕ್ಷಿಯಾಗಿ ಹೋಗಿಲ್ಲ. ರಾಜ್ಯಾಧ್ಯಕ್ಷ ಹುದ್ದೆಯಲ್ಲಿರೋದ್ರಿಂದ ಹೋಗಿದ್ದೇವೆ. ನಾವು ಪಕ್ಷದ ವಿರುದ್ಧ ಹೋಗಿಲ್ಲ. ಅವರು ಸಭೆ ಕರೆದಿರುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಅವರೆಲ್ಲ ಮಾಜಿಗಳು ಆಗಲು ಕಾರಣರು ಯಾರು? ಅದು ಅಲ್ಲಿ ಚರ್ಚೆ ಆಗಬೇಕಿತ್ತಲ್ಲ?, ಅದರ ಆತ್ಮಾವಲೋಕನ ಆಗಬೇಕಿತ್ತಲ್ಲ?. ಅವರೆಲ್ಲ ಆಯ್ಕೆ ಆಗಿದ್ದರೆ ಇಂದು ನಮ್ಮ ಸರ್ಕಾರ ಇರುತಿತ್ತು. ಅವರನ್ನೆಲ್ಲ ಸೋಲಿಸಿದ ಕಾಣದ ಕೈಗಳು ಯಾವುವು? ಆ ಕೈಗಳು ಎರಡೋ, ನಾಲ್ಕು ಅನ್ನೋದು ಚರ್ಚೆ ಆಗಬೇಕಿತ್ತಲ್ಲ? ಈಗ ಸಾಂತ್ವನ ಹೇಳುತ್ತಿದ್ದಾರೆ. ನೀವು ಸೋತಿದ್ದಿರಿ, ಪಾಪ ನಾವು ಇಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆವು. ಎರಡು ವರ್ಷಗಳ ನಂತರ ಇವರಿಗೆ ಈಗ ಬೇಕಾಗಿದೆ ಎಂದು ಟೀಕಿಸಿದರು.
ವಿಶೇಷ ಪ್ಯಾಕೇಜ್ಗೆ ವಿರೋಧ:ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು. ಎಷ್ಟೊ ಪೊಲೀಸ್ ಅಧಿಕಾರಿಗಳು ಪ್ರಾಣ ಕೊಟ್ಟಿದ್ದಾರೆ. ಎಷ್ಟೋ ರೈತರನ್ನು ಹತ್ಯೆ ಮಾಡಿದ್ದಾರೆ. ಸಾಮಾನ್ಯ ಜನರ ಮೇಲೆ ಹಲ್ಲೆ ಮಾಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕು ಅಂತ ನ್ಯಾಯಾಲಯ ತೀರ್ಮಾನ ಮಾಡುತ್ತೆ. ಈಗ ಅವರು ಅಲ್ಲೆಲ್ಲ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಮುಂದಿಟ್ಟು ಶರಣಾಗತಿ ಆಗಬೇಕಿತ್ತು. ಸಿದ್ಧರಾಮಯ್ಯ ಅವರೇ ನಕ್ಸಲರಿಗೆ ಶರಣರಾಗಿದ್ದಾರೆ. ಇವತ್ತು ಶರಣರಾಗಿ ನಾಳೆ ವೆಪನ್ಸ್ ತಂದು ಕೊಡಿ ಅಂತ ಮುಂದಿನ ದಿನಗಳಲ್ಲಿ ಇದೊಂದು ಸ್ಟೈಲ್ ಆಗತ್ತೆ. ಕೆಲ ದಿನ ಬಂದೂಕು ಹಾಕಿಕೊಂಡು ಓಡಾಡ್ತಾರೆ. ನಂತರ 6 ತಿಂಗಳು ಮಾಯವಾಗ್ತಾರೆ. ನಂತರ ಶರಣಾಗ್ತಾರೆ. ಅವರಿಗೆ ವಿಶೇಷ ಪ್ಯಾಕೇಜ್ ಕೊಡ್ತಿರಿ?. ಹಾಗಾದ್ರೆ ಪೊಲೀಸರ ಕುಟುಂಬಗಳಿಗೆ ಏನು ಹೇಳ್ತಿರಿ?. ಅವರಿಗೆ ಪ್ಯಾಕೇಜ್ ಕೊಟ್ಟಿದ್ದಿರಾ? ಪೊಲೀಸರು, ನಾಗರಿಕರಿಗೆ ಏನು ಕೊಟ್ಟಿದ್ದೀರಿ?. ಮುಖ್ಯವಾಹಿನಿಗೆ ಬರಬೇಕು ಅಂದ್ರೆ ಕಾನೂನು ಪ್ರಕಾರ ಬರಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಶಕ್ತಿಪ್ರದರ್ಶನ ವಿಚಾರ:ಮಾಧ್ಯಮಗಳ ವಿರುದ್ಧ ಗರಂ ಆದ ಅವರು, ಮಾಧ್ಯಮಗಳಲ್ಲಿ ನೋಡಿ ಅಂಜಿ ಹೋದೆ, ನಡುಗಿ ಹೋದೆ. ಅಖಾಡಕ್ಕಿಳಿದ ಯಡಿಯೂರಪ್ಪ. ಯತ್ನಾಳಗೆ ಭಾರೀ ಹಿನ್ನಡೆ. ವಾಹ್ ರೇ ವಾಹ್ ಮಾಧ್ಯಮಗಳೇ ಎಂದು ಗರಂ ಆದ ಯತ್ನಾಳ, ಯಾರು ಅಖಾಡಕ್ಕಿಳಿದರೆ ಆಗೋದೇನಿದೆ?. ಯತ್ನಾಳಗೆ ಯಾರೂ ಏನೂ ಮಾಡೋಕೆ ಆಗಲ್ಲ. ನೀವು ಎರಡು ದಿನ ಸುದ್ದಿ ಹೊಡಿರಿ ಎಂದರು.--------------ವಿಜಯೇಂದ್ರನಿಗೆ ಖರ್ಗೆ ಭಯ..!
ಪ್ರಿಯಾಂಕ ಖರ್ಗೆ ವಿರುದ್ಧದ ಹೋರಾಟಕ್ಕೆ ವಿಜಯೇಂದ್ರ ಕಲಬುರಗಿಗೆ ಬರಲೇ ಇಲ್ಲ. ಅವರಿಗೂ ನಿಮ್ಮ ತಂದೆಯದು ಎಲ್ಲ ಹೊರಗೆ ತಗೆಯುತ್ತೇವೆ ಅಂತ ಭಯ ಹುಟ್ಟಿಸಿರಬೇಕು. ವಿಜಯೇಂದ್ರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ಅಂತ ಇಡೀ ಊರ ತುಂಬ ವಿಜಯೇಂದ್ರ ಹಿತೈಷಿಗಳು ದೊಡ್ಡ ಕಾರ್ಯಕ್ರಮ ಮಾಡಿದ್ದರು. ವಿಜಯೇಂದ್ರ ಯಾಕೆ ಬರಲಿಲ್ಲ? ಯಾಕಂದರೆ ಪ್ರಿಯಾಂಕ ಖರ್ಗೆ ಧಮ್ಕಿ ಕೊಟ್ಟನಾ?. ವಿಜಯೇಂದ್ರನಿಗೆ ಭಯವನ್ನು ಹುಟ್ಟಿಸಿದ್ದಾರೆ, ಅದಕ್ಕೆ ಸುರಕ್ಷತೆಯ ಭಯ ಇತ್ತಾ ಎಂದು ವಿಜಯೇಂದ್ರನೇ ಸ್ಪಷ್ಟಪಡಿಸಬೇಕು.- ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ
-----------ಬಾಕ್ಸ್
ಮುತ್ತು ಕೊಡುವ ಗೃಹ ಮಂತ್ರಿಗೃಹ ಸಚಿವ ಜಿ.ಪರಮೇಶ್ವರ ವಿರುದ್ಧವೂ ವಾಗ್ದಾಳಿ ನಡೆಸಿ, ಮುತ್ತು ಕೊಡುವ ಗೃಹ ಮಂತ್ರಿ ಎಂದು ಟೀಕಿಸಿದರು. ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡದೆ ಮುತ್ತು ಕೊಡಬೇಕಾ ಎಂದಿದ್ದ ಜಿ.ಪರಮೇಶ್ವರ ವಿರುದ್ಧ ವ್ಯಂಗ್ಯವಾಡಿದ ಯತ್ನಾಳ, ನೀವು ಸಾಬರಿಗೆ ಮುತ್ತು ಕೊಡಿ. ಕೆ.ಜಿ.ಹಳ್ಳಿಗೆ ಮುತ್ತು ಕೊಡಿ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಮುತ್ತು ಕೊಡಿ. ದಿನಾಲು ಮುತ್ತು ಕೊಡುತ್ತಾ ಹೋಗಿ, ಮುತ್ತು ಕೊಡುವ ಗೃಹ ಮಂತ್ರಿಗಳಾಗಿ ಎಂದು ಯತ್ನಾಳ ಲೇವಡಿ ಮಾಡಿದರು!