ಚನ್ನಪಟ್ಟಣ: ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳ ಕಲರವಕ್ಕೆ ಕಾಲ ಕೂಡಿ ಬಂದಿದ್ದು, ಪ್ರವಾಸಿಗರನ್ನು ಸೆಳೆಯಲು ವಾಟರ್‌ಬೋಟ್‌ಗಳು ಸಿದ್ಧವಾಗಿವೆ.

ಚನ್ನಪಟ್ಟಣ: ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳ ಕಲರವಕ್ಕೆ ಕಾಲ ಕೂಡಿ ಬಂದಿದ್ದು, ಪ್ರವಾಸಿಗರನ್ನು ಸೆಳೆಯಲು ವಾಟರ್‌ಬೋಟ್‌ಗಳು ಸಿದ್ಧವಾಗಿವೆ.

ರಾಜಧಾನಿ ಬೆಂಗಳೂರಿಗೆ ಹತ್ತಿರವಿರುವ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ರಾಮನಗರದ ರಂಗರಾಯನದೊಡ್ಡಿ ಕೆರೆಯ ಬಳಿಕ ಚನ್ನಪಟ್ಟಣದ ಕಣ್ವ ಜಲಾಶಯದಲ್ಲೂ ಜಲಕ್ರೀಡೆಗಳು ಪ್ರಾರಂಭಗೊಳ್ಳುತ್ತಿದೆ.

ಕೆಎಸ್‌ಟಿಡಿಸಿ ಹಾಗೂ ಕಣ್ವ ಕಾವೇರಿ ಅಡ್ವೆಂಚರ್ಸ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಸಿದ್ಧತೆ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳ ಸೇವೆ ಲಭ್ಯವಾಗಲಿದೆ.

ವಿವಿಧ ವಾಟರ್ ಬೋಟ್‌ಗಳು: ಕಣ್ವ ಜಲಾಶಯದಲ್ಲಿ ಕಯಾಕಿಂಗ್ , ಬಿಗ್ ಬೋಟ್, ಜೇಟ್ ಸ್ಕೀ(ವಾಟರ್ ಬೈಕ್), ವಾಟರ್ ಬೋಟ್, ಪೆಡಲ್ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್, ಬಂಬರ್ ಬೋಟ್, ಪ್ಲೇಯಿಂಗ್ ಬೋಟ್‌ಗಳನ್ನು ಹಾಕಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಲಸಾಹಸ ಪ್ರಿಯರು ಕಣ್ವ ಜಲಾಶಯದಲ್ಲಿ ತಮ್ಮಿಷ್ಟದ ವಾಟರ್‌ಬೋಟ್‌ನಲ್ಲಿ ವಿಹಾರ ನಡೆಸಬಹುದಾಗಿದೆ.

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು:

ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈಗಾಗಲೇ ರಾಮನಗರದ ರಂಗರಾಯನದೊಡ್ಡಿ ಕೆರೆಯಲ್ಲಿ ವಾಟರ್‌ಬೋಟಿಂಗ್ ಆರಂಭಿಸಲಾಗಿದೆ. ಇದೇ ನಿಟ್ಟಿನಲ್ಲಿ ಚನ್ನಪಟ್ಟಣದ ಕಣ್ವ ಜಲಾಶಯದಲ್ಲಿ ಸಹ ಜಲಸಾಹಸಕ್ರೀಡೆಗಳನ್ನು ಆರಂಭಿಸಿ ಪ್ರವಾಸಿಗರನ್ನು ಸೆಳೆಯಲು ಸಿದ್ಧತೆ ನಡೆಸಲಾಗಿದೆ.

ಹಿಂದೆಯೂ ಜಲಸಾಹಸ ಕ್ರೀಡೆ:

ಒಂದು ವರ್ಷದ ಹಿಂದೆ ಕಣ್ವ ಜಲಾಶಯದಲ್ಲಿ ಕೆಎಸ್‌ಟಿಡಿಸಿ ಹಾಗೂ ಕೊಸ್ಟಲ್ ಸಿ.ಅಡೇಂಚರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಅನೇಕರು ವಾಟರ್‌ಬೋಟ್‌ನಲ್ಲಿ ಜಾಲಿ ರೈಡ್ ನಡೆಸಿದ್ದರು. ಇದೀಗ ಕೆಎಸ್‌ಟಿಡಿಸಿ ಹಾಗೂ ಕಣ್ವ ಕಾವೇರಿ ಅಡ್ವೆಂಚರ್‍ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮತ್ತಷ್ಟು ಜಲಸಾಹಸ ಕ್ರೀಡೆಗಳನ್ನು ಅಳವಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧತೆ ನಡೆಸಲಾಗಿದೆ.

ಕಣ್ವ ಜಲಾಶಯವೇ ಏಕೆ:

ಜಿಲ್ಲೆಯಲ್ಲಿ ಮಂಚನಬೆಲೆ, ಇಗ್ಗಲೂರು, ಕಣ್ವಸೇರಿದಂತೆ ಸಾಕಷ್ಟು ಜಲಾಶಯಗಳು ಇದ್ದರೂ ಸಹ ಜಲಸಾಹಸ ಕ್ರೀಡೆಗಳು ಇರಲಿಲ್ಲ. ಆದರೆ ಇದೀಗ ರಾಮಗರದ ರಂಗರಾಯನದೊಡ್ಡಿಯ ಜತೆಗೆ ಕಣ್ವ ಜಲಾಶಯದಲ್ಲೂ ಜಲಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಬೇರೆ ಜಲಾಶಯಗಳಲ್ಲಿ ಮಳೆಬಂದಾಗ ಮಾತ್ರ ಜಲಾಶಯಭರ್ತಿಯಾಗುತ್ತದೆ. ಆದರೆ ಕಣ್ವ ಜಲಾಶಯಕ್ಕೆ ಇಗ್ಗಲೂರು ಬ್ಯಾರೇಜ್ ನಿಂದ ಪೈಪ್‌ಲೈನ್ ಮೂಲಕ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಬಹುತೇಕ ಎಲ್ಲ ಕಾಲದಲ್ಲೂ ನೀರಿನ ಲಭ್ಯತೆ ಇರುತ್ತದೆ. ಕಣ್ಣ ಜಲಾಶಯದಲ್ಲಿ ಜಲಸಾಹಸ ಕ್ರೀಡೆ ಆರಂಭಿಸಿದರೆ ವರ್ಷಪೂರ್ತಿ ಜಲಸಾಹಸಕ್ರೀಡೆ ನಡೆಸಲು ಅವಕಾಶ ದೊರೆಯುತ್ತದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇನ್ನು ಕಣ್ವ ಜಲಾಶಯ ಬೆಂಗಳೂರಿಗೆ ಹತ್ತಿರವಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿರನ್ನು ಆಕರ್ಷಿಸಬಹುದು ಎಂಬ ನಿಟ್ಟಿನಲ್ಲಿ ಕಣ್ವ ಜಲಾಶಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಲಸಾಹಸ ಕ್ರೀಡೆ ಆರಂಭಿಸುವ ಜತೆಗೆ ಕಣ್ಣ ಜಲಾಶಯದ ಬಳಿ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲು ನಿರ್ಧರಿಸಲಾಗಿದೆ. ಇನ್ನು ಬೆಂ-ಮೈ ಎಕ್ಸ್‌ಪ್ರೆಸ್ ವೇಗೂ ಸಹ ಕಣ್ವ ಜಲಾಶಯ ಹತ್ತಿರದಲ್ಲೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.

ಕಣ್ವ ಕಾವೇರಿ ಅಡ್ವೆಂಚರ್ಸ್‌ ಸಂಸ್ಥೆಯು ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗೆ ಸರ್ಕಾರದ ಅನುಮತಿ ಪಡೆದಿದ್ದು, ವಾಟರ್ ಬೋಟ್‌ಗಳು ಹಾಗೂ ಅಗತ್ಯ ಪರಿಕರಗಳೊಂದಿಗೆ ಜಲಾಶಯದಲ್ಲಿ ಪ್ರವಾಸಿಗರಿಗೆ ಸೇವೆ ನೀಡಲು ಸಿದ್ದತೆ ಮಾಡಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿಗರು ಬಂದು ಜಲಾಶಯದಲ್ಲಿ ಜಲಕ್ರೀಡೆಗಳಲ್ಲಿ ಮಿಂದೆಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜಲಸಾಹಸ ಕ್ರೀಡೆಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.

ಪೊಟೋ೫ಸಿಪಿಟಿ೧,೨: ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳಿಗೆ ಸಿದ್ಧವಾಗಿರುವ ಬೋಟ್‌ಗಳು.