ವಿಜಯ ಪ್ರಕಾಶ್ ಗಾಯನಕ್ಕೆ ಮನ ಸೋತ ಯುವ ಸಮೂಹ

| Published : Oct 25 2023, 01:15 AM IST

ಸಾರಾಂಶ

ವಿಜಯ ಪ್ರಕಾಶ್ ಅವರು ಡಾ.ಪುನೀತ್ ರಾಜ್ ಕುಮಾರ್ ಅವರಿಗಾಗಿ ‘ರಾಜಕುಮಾರ’ ಚಿತ್ರದ ಬೊಂಬೆ ಹೇಳುತೈತೆ ಎಂಬ ಹಾಡನ್ನು ಹಾಡಿ ಯುವ ಸಮೂಹವನ್ನು ಎದ್ದು ಕುಣಿಯುವಂತೆ ಮಾಡುವುದರ ಜೊತೆಗೆ ಪುನೀತ್ ನೆನಪು ಎಲ್ಲರನ್ನು ಭಾವುಕರನ್ನಾಗಿಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಯುವ ಮನಸ್ಸುಗಳನ್ನು ಸಂಭ್ರಮದ ಅಲೆಯಲ್ಲಿ ತೇಲಿಸುವ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ‘ಗಾನ’ ಮಡಿಕೇರಿಯಲ್ಲಿ ಎಲ್ಲರ ಮನ ಸೆಳೆಯಿತು. ಮಡಿಕೇರಿ ದಸರಾ ಹಿನ್ನೆಲೆ ಆಯುಧ ಪೂಜಾ ದಿನವಾದ ಸೋಮವಾರ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮದ ವರ್ಣ ರಂಜಿತ ವೇದಿಕೆಯಲ್ಲಿ ನಡೆದ ‘ಗಾನವೈಭವದಲ್ಲಿ’ ವಿಜಯ ಪ್ರಕಾಶ್ ಅವರು ಹಾಡಿದ ಗಾನಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಈ ಬಾರಿ ದಸರಾ ಮಹೋತ್ಸವದ ಹಾಡುಗಾರರಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ವಿಜಯ ಪ್ರಕಾಶ್ ಗಾನವೈಭವ ಎಲ್ಲರನ್ನು ಆಕರ್ಷಿಸಿತು. ವಿಜಯ ಪ್ರಕಾಶ್ ಅವರು ಡಾ.ಪುನೀತ್ ರಾಜ್ ಕುಮಾರ್ ಅವರಿಗಾಗಿ ‘ರಾಜಕುಮಾರ’ ಚಿತ್ರದ ಬೊಂಬೆ ಹೇಳುತೈತೆ ಎಂಬ ಹಾಡನ್ನು ಹಾಡಿ ಯುವ ಸಮೂಹವನ್ನು ಎದ್ದು ಕುಣಿಯುವಂತೆ ಮಾಡುವುದರ ಜೊತೆಗೆ ಪುನೀತ್ ನೆನಪು ಎಲ್ಲರನ್ನು ಭಾವುಕರನ್ನಾಗಿಸಿತು. ಈ ಸಂದರ್ಭ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರನ್ನು ವೇದಿಕೆಗೆ ಆಹ್ವಾನಿಸಿ ಗಾನಕ್ಕೆ ಧ್ವನಿಗೂಡಿಸುವಂತೆ ಮಾಡಿದರು. ಕಾಣದಂತೆ ಮಾಯವಾದನು ಸೇರಿದಂತೆ ಹಲವು ಹಾಡುಗಳನ್ನು ವಿಜಯ ಪ್ರಕಾಶ್ ಅವರು ಹಾಡಿ ಪ್ರೇಕ್ಷಕರ ಮನ ರಂಜಿಸಿದರು. ಜನಪ್ರಿಯವಾದ ಮಡಿಕೇರಿ ಸಿಪಾಯಿ, ಯಾರೇ ನೀನು ರೋಜಾ ಹೂವೇ ಸೇರಿದಂತೆ ಹಲವು ಹಾಡುಗಳನ್ನು ಹಾಡಿ, ಪ್ರೇಕ್ಷಕರ ಮನ ಗೆದ್ದರು. ಈ ಸಂದರ್ಭ ಮಾತನಾಡಿದ ವಿಜಯ ಪ್ರಕಾಶ್‌, ಸ್ಥಳೀಯ ಶಾಸಕ ಡಾ.ಮಂತರ್‌ ಗೌಡ ಹಲವು ವರ್ಷಗಳಿಂದ ಸ್ನೇಹಿತರು, ಆ ನಿಟ್ಟಿನಲ್ಲಿ ಮಡಿಕೇರಿ ದಸರಾಗೆ ಆಗಮಿಸಲು ಶಾಸಕರು ಕಾರಣ, ದಸರಾ ಕಾರ್ಯಕ್ರಮ ನೀಡಲು ಅವಕಾಶ ನೀಡಿದ ಶಾಸಕರು, ಜಿಲ್ಲಾಡಳಿತ ಹಾಗೂ ದಸರಾ ಸಮಿತಿಗೆ ಕೃತಜ್ಞತೆ ಹೇಳಿದರು. ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ಪ್ರತಿ ವರ್ಷ ಮಡಿಕೇರಿ ದಸರಾಗೆ ಆಗಮಿಸಿ ಹಾಡುವಂತಾಗಬೇಕು ಎಂದು ಕೋರಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಅರಕಲಗೂಡು ಶಾಸಕ ಎ.ಮಂಜು, ನಂಜನಗೂಡು ಶಾಸಕ ದರ್ಶನ್ ದ್ರುವ ನಾರಾಯಣ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಇತರರು ಇದ್ದರು.