ವಕ್ಫ್ ಕಾಯ್ದೆ ರದ್ದುಪಡಿಸಿ ರೈತರಿಗೆ ನ್ಯಾಯ ಒದಗಿಸಲಿ

| Published : Nov 11 2024, 11:51 PM IST

ಸಾರಾಂಶ

ಆಸ್ತಿ ದಾಖಲೆಗಳಲ್ಲಿ ವಕ್ಫ್ ಬೋರ್ಡ್‌ ಆಸ್ತಿ ಎಂದು ಅನಧಿಕೃತವಾಗಿ ನಮೂದಿಸಿರುವುದನ್ನು ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿ ಶಿರಹಟ್ಟಿ ತಾಲೂಕು ಭಾರತೀಯ ಕಿಸಾನ್ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.

ಶಿರಹಟ್ಟಿ: ರೈತರ ಜಮೀನುಗಳ ಪಹಣಿಯ ಕಾಲಂ ನಂ. ೧೧ರಲ್ಲಿ ವಕ್ಫ್ ಬೋರ್ಡ್ ಆಸ್ತಿಯೆಂದು ಮತ್ತು ಮಠ, ಮಂದಿರಗಳ ಆಸ್ತಿ ದಾಖಲೆಗಳಲ್ಲಿ ವಕ್ಫ್ ಬೋರ್ಡ್‌ ಆಸ್ತಿ ಎಂದು ಅನಧಿಕೃತವಾಗಿ ನಮೂದಿಸಿರುವುದನ್ನು ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿ ಶಿರಹಟ್ಟಿ ತಾಲೂಕು ಭಾರತೀಯ ಕಿಸಾನ್ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಟಾಕಪ್ಪ ಸಾತಪೂತೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ, ನಾಗರಾಜ ಕುಲಕರ್ಣಿ ಮಾತನಾಡಿ, ವಕ್ಫ್ ಬೋರ್ಡ್ ಮಾಡುತ್ತಿರುವ ಲ್ಯಾಂಡ್‌ ಜಿಹಾದ್‌ನಿಂದ ಇಡಿ ಜಗತ್ತಿಗೆ ಅನ್ನ ನೀಡುವ ರೈತರು ಕಂಗಾಲಾಗಿದ್ದಾರೆ.

ಲ್ಯಾಂಡ್‌ ಮಾಫಿಯಾಕ್ಕೆ ರೈತರ ಆಸ್ತಿ ಅಷ್ಟೇ ಅಲ್ಲದೇ ಸಾರ್ವಜನಿಕ ಆಸ್ತಿ, ಮಠ, ಮಂದಿರ, ಸ್ಮಶಾನ, ಶಾಲೆ ಸೇರಿದಂತೆ ಇನ್ನೂ ಮುಂತಾದ ಆಸ್ತಿಗಳ ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ. ವಕ್ಫ್ ಬೋರ್ಡ್ ನಮ್ಮ ಹಿಂದೂ ಧರ್ಮದ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿರುವುದರಿಂದ ರೈತ ಸಮುದಾಯ, ಮಠಾಧೀಶರು, ಸಾರ್ವಜನಿಕರು ಕಂಗಾಲಾಗುವಂತೆ ಮಾಡಿದ್ದು, ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸಾಕಷ್ಟು ಆಸ್ತಿಗಳು ಈಗಾಗಲೇ ವಕ್ಫ್ ಬೋರ್ಡ್ ಕೈವಶವಾಗಿವೆ. ಇದಕ್ಕೆಲ್ಲ ಸರ್ಕಾರವೇ ಹೊಣೆಯಾಗಿದೆ. ಅಲ್ಲದೇ ಜಿಲ್ಲೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಕಂಡುಬರುತ್ತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಕ್ಫ್ ಬೋರ್ಡ್‌ಗಳ ಪುಂಡಾಟವನ್ನು ಗಂಭೀರವಾಗಿ ಪರಿಗಣಿಸಿ ಇಡೀ ವಕ್ಫ್ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ರೈತರು ನೆಮ್ಮದಿಯ ಜೀವನ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ರೈತರಿಗೆ ಇದು ಬಿಸಿ ತುಪ್ಪವಾಗಿದ್ದು, ರೈತರ ಹಿತಕಾಯಬೇಕು ಎಂದು ರೈತರು ಕೋರಿದ್ದಾರೆ.

ಭಾರತೀಯ ಕಿಸಾನ್ ಸಂಘದ ಶಿರಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಅಜಯ ಕರಿಗೌಡ್ರ, ವಸಂತಗೌಡ ಕರಿಗೌಡ್ರ, ಗಂಗಪ್ಪ ಛಬ್ಬಿ, ಬಸವರಾಜ ಬೆಂತೂರ, ಮಂಜುನಾಥ ಮಟ್ಟಿ, ಈರಪ್ಪ ತಳವಾರ, ಮೌನೇಶ ಗೌಳಿ, ಫಕ್ಕೀರೇಶ ಬಕ್ಕಸದ, ಫಕ್ಕೀರೇಶ ಕಲ್ಲಪ್ಪನವರ, ಅಶೋಕ ಮುಳಗುಂದ, ಶಿವಲಿಂಗಪ್ಪ ಕೋಡಿ, ಲಕ್ಷ್ಮಣ ಬೇರಗಣ್ಣವರ, ರಮೇಶ ವಾಲಿಕಾರ ಸೇರಿ ಅನೇಕ ರೈತರು ಮನವಿ ನೀಡುವ ವೇಳೆ ಇದ್ದರು.

೧೧ ಎಸ್.ಎಚ್.ಟಿ. ೧ಕೆ- ವರ್ಕ್ಫ ಬೋರ್ಡ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ತಾಲೂಕ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.