ಸಾರಾಂಶ
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ ವ್ಯಾಪಿಸಿದ್ದು, ಇದರಿಂದ ಬಳಕೆದಾರರಿಗೆ ಉತ್ತಮ ರೀತಿಯಲ್ಲಿ ಉಪಯೋಗವಾಗುತ್ತಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಮುಖ್ಯ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಮೂಲತತ್ವಗಳನ್ನು ಗ್ರಹಿಸಬೇಕು ಎಂದು ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಪಂಕಜ್ ಗುಪ್ತಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ ವ್ಯಾಪಿಸಿದ್ದು, ಇದರಿಂದ ಬಳಕೆದಾರರಿಗೆ ಉತ್ತಮ ರೀತಿಯಲ್ಲಿ ಉಪಯೋಗವಾಗುತ್ತಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಮುಖ್ಯ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಮೂಲತತ್ವಗಳನ್ನು ಗ್ರಹಿಸಬೇಕು ಎಂದು ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಪಂಕಜ್ ಗುಪ್ತಾ ತಿಳಿಸಿದರು.ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲೀಕರಣ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸಾಧಿಸುವ ಛಲವುಳ್ಳ ಪ್ರತಿಯೊಬ್ಬರೂ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಸಿಕೊಂಡು, ಸಿಗುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಸತತ ಅಧ್ಯಯನಶೀಲರಾಗಬೇಕು ಎಂದರು.
ಭಾರತದಲ್ಲಿ ಈಗ ಈ-ಕಾಮರ್ಸ್ ಕ್ಷೇತ್ರ ಕ್ಷಿಪ್ರವಾಗಿ ಬೆಳೆಯುತ್ತಿದ್ದು, ಶೇ.98 ರಷ್ಟು ಡಿಜಿಟಲ್ ವಹಿವಾಟು ನಡೆಯುತ್ತಿದೆ. ಪ್ರಸ್ತುತ ಎಐ ಮತ್ತು ಡಾಟಾ ಸೈನ್ಸ್ (ಡಿಎಸ್) ಹಲವಾರು ವಿಷಯಗಳನ್ನು ಆಯೋಜಿಸಲು ಮತ್ತು ವಿಶ್ಲೇಷಿಸಲು ಅನುಕೂಲಕಾರಿಯಾಗಿದೆ. ಪ್ರತಿಯೊಂದು ಸವಾಲು ಹೊಸ ಅವಕಾಶವನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಮತ್ತು ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆಧುನಿಕ ತಂತ್ರಜ್ಞಾನಕ್ಕೆ ತಮ್ಮನ್ನು ತೊಡಗಿಸಿಕೊಂಡು ಯಶಸ್ಸು ಕಾಣಬೇಕು ಎಂದು ಅವರು ಕಿವಿಮಾತು ಹೇಳಿದರು.ಕರ್ನಾಟಕ ಬ್ಯಾಂಕ್ಎಜಿಎಂ ಟಿ.ಆರ್. ಅರುಣ್, ಕ್ಲಸ್ಟರ್ ಹೆಡ್ ವೆಂಕಾರೆಡ್ಡಿ, ಸರಸ್ವತಿಪುರಂ ಶಾಖೆಯ ಮುಖ್ಯ ವ್ಯವಸ್ಥಾಪಕ ಪ್ರಶಾಂತ್, ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮೊದಲಾದವರು ಇದ್ದರು.