ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪೋಕ್ಸೋ ಹಾಗೂ ಮಹಿಳಾ ಕಾನೂನುಗಳು ಸದುಪಯೋಗಕ್ಕಿಂತ ದುರುಪಯೋಗ ಆಗುತ್ತಿರುವ ಬಗ್ಗೆ ಗಮನಕ್ಕೆ ಬರುತ್ತಿದ್ದು, ಇದು ಕೇಳುವುದಕ್ಕೂ, ನೋಡುವುದಕ್ಕೂ ಬಹಳ ಬೇಸರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಾದ ನೀವು ಸೂಕ್ಷ್ಮತೆಯನ್ನು ಅರಿತು, ಜನರಲ್ಲಿ ಅರಿವು ಮೂಡಿಸುವುದು ಹಾಗೂ ಕಾನೂನಿನ ಸದ್ಭಳಕೆ ವಿಷಯದಲ್ಲಿ ಕಾಳಜಿ ತೋರಬೇಕಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಚೇತನಾ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಮತ ಚಲಾವಣೆಯ ಹಕ್ಕು ಇರಲಿಲ್ಲ, ಸಮಾನತೆ ಇರಲಿಲ್ಲ, ಈ ರೀತಿಯಲ್ಲಿ ಎಲ್ಲಾ ರಂಗಗಳಲ್ಲೂ ಅಸಮಾನತೆ ಇದ್ದ ಸಂದರ್ಭದಲ್ಲಿ ೧೫ ಸಾವಿರ ಮಹಿಳೆಯರ ಚಳವಳಿ ಪ್ರಾರಂಭಿಸಿ, ಹೋರಾಡಿದ ನಂತರದಲ್ಲಿ ವಿಶ್ವಸಂಸ್ಥೆ ಮಹಿಳಾ ದಿನಚರಣೆ ಘೋಷಿಸಿದ್ದು, ಇತಿಹಾಸ. ಇಂದು ಮಹಿಳಾ ಹಕ್ಕುಗಳ ಬಗ್ಗೆ ಹಲವು ಕಾನೂನುಗಳಿದ್ದರೂ ಲಿಂಗ ಅಸಮಾನತೆ ಇದ್ದೇ ಇದೆ, ಆದ್ದರಿಂದ ನೀವುಗಳು ಬದಲಾವಣೆ ಪ್ರಾರಂಭವಾಬೇಕು. ಪೋಷಕರು ನಂಬಿಕೆ ಇಟ್ಟು, ಹೊರಗೆ ಕಳುಹಿಸುತ್ತಾರೆ, ಅವರ ನಂಬಿಕೆಗೆ ಚ್ಯುತಿ ಬರದಂತೆ ನಡೆಯಬೇಕು ಎಂದು ತಿಳಿಸಿ, ಕೆಲವು ಸಲಹೆ, ಸೂಚನೆಗಳನ್ನು ನೀಡಿದರು. ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಹಾಗೂ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಭಾಗ್ಯಲಕ್ಷ್ಮಿ ಎಚ್., ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಮಡಿವಾಳಪ್ಪ ಮಾಟೊಳ್ಳಿ ಹಾಗೂ ಗೀತಾ, ನ್ಯಾಯಾಲಯದ ನೌಕರ ಯಶವಂತ್, ಇತರರು ಇದ್ದರು.