ಸಾರಾಂಶ
ಬೀದರ್: ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣ ಪಡೆಯುವಂತಾಗಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿ ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೆ ಇದನ್ನು ಹಿಂಪಡೆಯಬಾರದು ಎಂದು ಎಬಿವಿಪಿ ಆಗ್ರಹಿಸಿದೆ.
ನಗರದ ಡಾ. ಅಂಬೇಡ್ಕರ್ ವೃತ್ತ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದರು.ಭಾರತೀಯ ಶಿಕ್ಷಣ ನೀತಿ ಜಾರಿ ಹಾಗೂ ಕೌಶಲ್ಯಯುಕ್ತ ಯುವಶಕ್ತಿ ನಿರ್ಮಾಣಕ್ಕೆ ಇದು ಅಗತ್ಯವಾಗಿದೆ ಎನ್ಇಪಿ ಅನ್ನು ಮೊದಲ ಬಾರಿಗೆ ಅನುಷ್ಠಾನಗೊಳಿಸಿದ್ದು ಕರ್ನಾಟಕ ರಾಜ್ಯವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಎನ್ಇಪಿ ತೆಗೆಯುವುದಾಗಿ ಹೇಳಿದ ಕಾರಣಕ್ಕಾಗಿಯೇ ಹೊಸ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಸರ್ಕಾರದ ಈ ನಡೆಯನ್ನು ಎಬಿವಿಪಿ ಖಂಡಿಸುತ್ತದೆ. ಮುಂದಿನ 20-25 ವರ್ಷಗಳನ್ನು ಗಮನದಲ್ಲಿ ಇರಿಸಿಕೊಂಡು ಇಡೀ ದೇಶಕ್ಕೆ ಅನ್ವಯವಾಗುವಂತಹ ಒಂದೇ ಬಗೆಯ ಶಿಕ್ಷಣ ಪದ್ಧತಿ ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರವು ರಾಷ್ಟ್ರೀಯತೆಯನ್ನು ತುಂಡರಿಸಿ, ಪ್ರತ್ಯೇಕತೆಯತ್ತ ಹೆಜ್ಜೆ ಇರಿಸುತ್ತಿರುವುದು ಸರಿಯಲ್ಲ. ರಾಜ್ಯದ ಬೆಳೆವಣಿಗೆಗೆ ಇದು ಹಿನ್ನಡೆಯಾಗಲಿದೆ. ಕೂಡಲೇ ರಾಜ್ಯ ಸರ್ಕಾರವು ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಸಂಚಾಲಕ ಶಶಿಕಾoತ ರಾಕಲೇ ಮತ್ತಿತರರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿ ಸದಸ್ಯ ಸಾಯಿ, ಬೋಸ್ಲೆ ತಾಲೂಕು ಸಂಚಾಲಕ ಅಂಬ್ರೇಶ, ಬಿರಾದಾರ್, ನಾಗರಾಜ, ಅಮರ್ ಸ್ವಾಮಿ, ಅಭಿಷೇಕ್ ಶಂಭು, ಮಹೇಶ್ ಆನಂದ್, ಸಿದ್ದರಾಮೇಶ್ವರ ಪವನ್ ಪಾಂಚಾಳ್, ಶಿವಶರಣು ಸಂಗಮೇಶ್ ಮೂಳೆ , ವಿದ್ಯಾರ್ಥಿನಿ ಪೂಜಾ ಅಂಬಿಕಾ ಉಪಸ್ಥಿತರಿದ್ದರು.