ಹೊಸಕೋಟೆ: ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಿ ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ನೀಡಿದರು

ಹೊಸಕೋಟೆ: ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಿ ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ನೀಡಿದರು. ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಹೆಚ್ಚಿನ ಅಹವಾಲುಗಳು ಜಮೀನು ವಿವಾದಗಳಿಗೆ ಸಂಬಂಧಿಸಿದ್ದು, ಮೊದಲ ಕಾರಣ ಸರ್ವರ್ ಸಮಸ್ಯೆ, ಮತ್ತೆ ಟೆಕ್ನಿಕಲ್ ಸಮಸ್ಯೆ ಜೊತೆಗೆ ಎಸ್‌ಐಆರ್ ಎಂಬ ಉತ್ತರಗಳು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯಾಧಿಕಾರಿಗಳಿಂದ ಬರುತ್ತಿರುವುದು ಸಮಂಜಸವಲ್ಲ. ಸರ್ವರ್ ಹಾಗೂ ಟೆಕ್ನಿಕಲ್ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆಗೆ ಸಮಸ್ಯೆ ಬಗ್ಗೆ ಪತ್ರ ಬರೆಯಲು ತಹಸೀಲ್ದಾರ್ ಶೀತಲ್ ಅವರಿಗೆ ತಿಳಿಸಿದರು. ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಂಗಳೂರಿನ ಕಸ ತಂದು ವಿಲೇವಾರಿ ನೆಪದಲ್ಲಿ ಪರಿಸರ ಮಾಲಿನ್ಯ ಮಾಡಲಾಗುತ್ತಿದೆ. ವಿದ್ಯುತ್ ಕೇಬಲ್‌ಗಳನ್ನು ಸುಟ್ಟು ಅದರಲ್ಲಿನ ತಾಂಬ್ರ ಸಂಗ್ರಹಿಸುವುದು, ಕೋಳಿ ಕಸ ಬಿಸಾಡಿ ಬೆಂಕಿ ಹಚ್ಚುತ್ತಿರುವ ದೂರುಗಳು ಬಂದಿದ್ದು ಈ ಭಾಗದ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ.ಇದನ್ನು ಪ್ರಶ್ನಿಸಿದಲ್ಲಿ ಕಿಡಿಗೇಡಿಗಳಿಂದ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ. ತಾಲೂಕಿನ ಚೀಮಂಡಹಳ್ಳಿ, ಸೂಲಿಬೆಲೆ, ಇಂಜನಹಳ್ಳಿ, ಗಣಗಲು ಕೆರೆ ಭಾಗದಲ್ಲಿ ಹಾಗೂ ಮೇಡಿ ಮಲ್ಲಸಂದ್ರ ಗ್ರಾಮಗಳ ಆಸು ಪಾಸಿನಲ್ಲಿ ಈ ಕೃತ್ಯ ನಡೆಯುತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ರಾತ್ರಿ ಗಸ್ತನ್ನು ಹೆಚ್ಚಿಸಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿ ಮಲ್ಲೇಶರಿಗೆ ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಶೀತಲ್, ಇಒ ಮುನಿಯಪ್ಪ, ಡಿವೈಎಸ್‌ಪಿ ಮಲ್ಲೇಶ್, ನಗರಸಭೆ ಆಯುಕ್ತ ನೀಲಾಲೋಚನ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಬ್‌ ಇತರರಿದ್ದರು.