ಸಾರಾಂಶ
ಬೇಸಿಗೆಯ ಬೇಗೆ ತೀವ್ರ ಗೊಳ್ಳುತ್ತಿದ್ದಂತೆ ಅಗ್ನಿ ಅವಘಡಗಳು ಕೂಡಾ ಹೆಚ್ಚುತ್ತಿವೆ. ಆಕಸ್ಮಿಕವಾಗಿ ಹುಲ್ಲಿಗೆ ಹತ್ತಿದ ಬೆಂಕಿ ಅಕ್ಕಪಕ್ಕವೆಲ್ಲಾ ಆವರಿಸಿ ನಾಲ್ಕು ಕಾರುಗಳು ಭಸ್ಮವಾಗಿರುವ ಘಟನೆ ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೇಸಿಗೆಯ ಬೇಗೆ ತೀವ್ರ ಗೊಳ್ಳುತ್ತಿದ್ದಂತೆ ಅಗ್ನಿ ಅವಘಡಗಳು ಕೂಡಾ ಹೆಚ್ಚುತ್ತಿವೆ. ಆಕಸ್ಮಿಕವಾಗಿ ಹುಲ್ಲಿಗೆ ಹತ್ತಿದ ಬೆಂಕಿ ಅಕ್ಕಪಕ್ಕವೆಲ್ಲಾ ಆವರಿಸಿ ನಾಲ್ಕು ಕಾರುಗಳು ಭಸ್ಮವಾಗಿರುವ ಘಟನೆ ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಭಾನುವಾರ ಸಂಜೆ ನಡೆದಿದೆ.ಉಪ್ಪಳ್ಳಿಯ ಬದ್ರಿಯಾ ಗ್ಯಾರೇಜ್ ನಲ್ಲಿ ಭಾನುವಾರ ಘಟನೆ ನಡೆದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ರಣ ಬಿಸಿಲಿನಿಂದ ಮಲೆನಾಡು ಕಾದ ಕಾವಲಿಯಂತಾಗಿದೆ. ಬಿಸಿಲಿನ ಝಳಕ್ಕೆ ಸಣ್ಣ ಹುಲ್ಲಿನ ಕಡ್ಡಿಯೂ ಬೆಂಕಿ ಉರಿಯಾಗಿ ನಾಲ್ಕು ಕಾರುಗಳಿಗೆ ಅಗ್ನಿ ಸ್ಪರ್ಶವಾಗಿದೆ. ಒಂದೇ ಕಡೆ ನಿಲ್ಲಿಸಿದ್ದ ನಾಲ್ಕು ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ಬದ್ರಿಯಾ ಗ್ಯಾರೇಜ್ ನಲ್ಲಿ ರಿಪೇರಿಗೆ ಬಿಟ್ಟಿದ್ದ ನಾಲ್ಕು ಕಾರುಗಳು ಏಕಾಏಕಿ ತಗುಲಿದ ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಆವರಿಸುವ ಮೊದಲೇ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಇಷ್ಟೇ ಅಲ್ಲದೇ ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿನ ಟೈರ್ ಸಹಾ ಬೆಂಕಿ ತಗುಲಿದೆ. ಬೇಸಿಗೆ ದಿನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು ಸಣ್ಣಪುಟ್ಟ ಕಿಡಿಗಳು ಸಹಾ ದೊಡ್ಡ ಅನಾಹುತ ಸೃಷ್ಟಿಸಲು ಅವಕಾಶ ಮಾಡಿಕೊಡುವಂತಾಗಿದೆ.ಪೋಟೋ ಫೈಲ್ ನೇಮ್ 24 ಕೆಸಿಕೆಎಂ 5ಚಿಕ್ಕಮಗಳೂರಿನ ಉಪ್ಪಳ್ಳಿಯ ಬದ್ರಿಯಾ ಗ್ಯಾರೇಜ್ ಬಳಿ ಆಕಸ್ಮಿಕ ಬೆಂಕಿನಿಂದ ಸುಟ್ಟು ಕರಕಲಾದ ಕಾರುಗಳು.