ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ<bha>;</bha> ಕ್ರಮ ಇಲ್ಲ: ಆರೋಪ

| Published : Dec 30 2023, 01:15 AM IST

ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ<bha>;</bha> ಕ್ರಮ ಇಲ್ಲ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಕ್ಕೆ ಸೇರಿದ ಜಾಗವೊಂದನ್ನು ಹಿಂದಿನ ನಗರಸಭಾಧಿಕಾರಿಗಳು ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಟ್ಟ ಪ್ರಕರಣದಲ್ಲಿ ನಾಲ್ಕು ಮಂದಿ ವಿರುದ್ದ ದಾಖಲಾದ ಕ್ರಿಮಿನಲ್ ಪ್ರಕರಣ ವಿರುದ್ಧ ಕ್ರಮಕ್ಕೆ ಸೂಚಿಸಿದ ಹಿರಿಯ ಅಧಿಕಾರಿಗಳ ಆದೇಶವನ್ನು ಸ್ಥಳೀಯ ನಗರಸಭೆ ಅಧಿಕಾರಿಗಳೇ ಉಲ್ಲಂಘಿಸಿರುವ ಪ್ರಕರಣ ಕೊಳ್ಳೇಗಾಲದಲ್ಲಿ ನಡೆದಿದೆ.

ನಗರಸಭೆ ಅಧಿಕಾರಿಗಳಿಂದಲೇ ಕರ್ತವ್ಯಲೋಪ । ಸರ್ಕಾರಿ ಜಾಗ ನಿಮಯ ಉಲ್ಲಂಘಿಸಿ ಅಕ್ರಮ ಖಾತೆ । ಪ್ರಕರಣದ ಕಡತ ನಾಪತ್ತೆ ಮಾಡಿದ ನೌಕರಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸರ್ಕಾರಕ್ಕೆ ಸೇರಿದ ಜಾಗವೊಂದನ್ನು ಹಿಂದಿನ ನಗರಸಭಾಧಿಕಾರಿಗಳು ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಟ್ಟ ಪ್ರಕರಣದಲ್ಲಿ ನಾಲ್ಕು ಮಂದಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮುಂದಿನ ಕ್ರಮಕೈಗೊಳ್ಳಿ ಎಂಬ ಹಿರಿಯ ಅಧಿಕಾರಿಗಳ ಆದೇಶವನ್ನು ಸ್ಥಳೀಯ ನಗರಸಭೆ ಅಧಿಕಾರಿಗಳೇ ಉಲ್ಲಂಘಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಿಂದಿನ ಪೌರಾಯುಕ್ತ ಡಿ ಕೆ ಲಿಂಗರಾಜು, ದ್ವಿತೀಯ ದರ್ಜೆ ನೌಕರ ಪ್ರದೀಪ್ ಕುಮಾರ್, ಕಂದಾಯಾಧಿಕಾರಿ ಮಲ್ಲು (ನಿವೖತ್ತ ) ಹಾಗೂ ಅಶೋಕ್ ಎಂಬುವರು ಅಕ್ರಮವಾಗಿ ದಾಖಲಾತಿ ಸೃಷ್ಟಿಸಿ ಸರ್ಕಾರಕ್ಕೆ ಸೇರಿದ ಜಾಗವನ್ನು ಕಾನೂನು ಬಾಹಿರವಾಗಿ ಖಾತೆ ಮಾಡಿ ನಕಲಿ ದಾಖಲೆ ಸೖಷ್ಟಿಸಿದ್ದಾರೆ ಎಂದು ಬಾಲರಾಜು ಎಂಬುವವರು ಈಗಾಗಲೇ ಜಿಲ್ಲಾಧಿಕಾರಿಗಳು, ಪೌರಾಡಳಿತ ನಿರ್ದೇಶನಾಲಯ ಸೇರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ವಾರ್ಡ್‌ ನಂಬರ್ 10 ರಲ್ಲಿ ಮನೆ ಸಂಖ್ಯೆ 10/238 ಅಸಸ್ ಮೆಂಟ್ ಸಂಖ್ಯೆ 432ರಲ್ಲಿ 312 ಅಡಿ ಜಾಗವನ್ನು ಎಂ.ಆರ್ .ರಂಗಸ್ವಾಮಿ ಎಂಬುವರಿಗೆ ಅಳತೆಗಿಂತ ಹೆಚ್ಚಾಗಿ ಸಾರ್ವಜನಿಕರು ಸಂಚರಿಸುವ ಜಾಗದಲ್ಲಿ ನಮೂನೆ 3 ನೀಡಿ ಲೋಪ ಎಸಲಾಗಿದೆ ಎಂದು ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆ ತನಿಖಾ ವರದಿ ಪರಿಶೀಲಿಸಿ ನಗರಸಭೆ ಹಿಂದಿನ ಪೌರಾಯುಕ್ತ ಲಿಂಗರಾಜು. ನೌಕರರಾದ ಪ್ರದೀಪ್, ಅಶೋಕ್, ಮಲ್ಲು ಅಕ್ರಮ ಮತ್ತು ಕಾನೂನು ಬಾಹಿರವಾಗಿ ನಮೂನೆ 3 ವಿತರಿಸಿರುವುದು ದೖಡಪಟ್ಟ ಹಿನ್ನೆಲೆ ಪೌರಾಡಳಿತ ನಿರ್ದೇಶನಾಲಯ ಸಹ ದೋಷಾರೋಪಣೆ ಪಟ್ಟಿ ತಯಾರಿಸಿ ಸದರಿ ಪ್ರಕರಣದ ಬಗ್ಗೆ ದಾಖಲೆ ಸಲ್ಲಿಸಲು ಕಚೇರಿಗೆ ಕೋರಿದ್ದರೂ ಕ್ರಮ ಕೈಗೊಂಡಿಲ್ಲ.

2020ರ ಜನವರಿ 18, ಜೂನ್‌ 8, ಜುಲೈ 31 , ಸೆಪ್ಟೆಂಬರ್‌ 15 ಹಾಗೂ 2021ರ ಮಾರ್ಚ್‌ 12 ರಂದು ಹಲವು ಬಾರಿ ಪತ್ರ ಬರೆದಿದ್ದರೂ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಹಿಂದಿನ ಜಿಲ್ಲಾಧಿಕಾರಿಳು ನಾಲ್ಕು ಮಂದಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಕ್ಕೆ ಸೂಚಿಸಿದ್ದರೂ ಈಗಿನ ನಗರಸಭೆ ಆಡಳಿತ ಈ ವಿಚಾರದಲ್ಲಿ ಮೌನ ವಹಿಸಿದೆ. ನೌಕರರೊಬ್ಬರು ಈ ಸಂಬಂಧ ಡಿಎಂಎ ಮತ್ತು ಜಿಲ್ಲಾಡಳಿತದಿಂದ ಬಂದ ಕೆಲ ಪತ್ರಗಳನ್ನೆ ನಾಪತ್ತೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಈ ಪ್ರಕರಣದ ಕಡತವೂ ನಾಪತ್ತೆಯಾಗಿದೆ. ಈ ಸಂಬಂಧ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದು ದೂರಿನಲ್ಲಿ ಬಾಲರಾಜು ಒತ್ತಾಯಿಸಿದ್ದಾರೆ.

ಲೋಕಾಯುಕ್ತದಲ್ಲೂ ಪ್ರಕರಣ:

ವಾರ್ಡ್‌ ನಂಬರ್ 10ರಲ್ಲಿ , ಮನೆ ಸಂಖ್ಯೆ 10/238 ಅಸಸ್ ಮೆಂಟ್ ಸಂಖ್ಯೆ 432ರಲ್ಲಿ 312 ಅಡಿ ಸಕಾ೯ರಿ ಆಸ್ತಿಯಾಗಿದ್ದು ಇದನ್ನು ನಿಯಮ ಉಲ್ಲಂಘಿಸಿ ಖಾತೆ ಮಾಡಿಕೊಟ್ಟ ಪ್ರಕರಣವೂ ಕಳೆದ 3 ವರ್ಷಗಳಿಂದಲೂ ಲೋಕಾಯುಕ್ತ ತನಿಖೆಯಲ್ಲಿದ್ದು ಫೆಬ್ರವರಿ 7ರಂದು ಅಂತಿಮ ಹಂತದ ವಿಚಾರಣೆ ನಡೆಯಲಿದೆ. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ನಗರಸಭೆ ಅಧಿಕಾರಿಗಳಿಂದಲೇ ಲೋಪ ಕುರಿತು ಮತ್ತು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಕುರಿತು ದಾಖಲೆ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.

10/238 ಅಸೆಸ್ ಮೆಂಟ್ ಸಂಖ್ಯೆಯ ಜಾಗ ಅಕ್ರಮ ಖಾತೆ ಮಾಡಿಕೊಟ್ಟಿರುವ ಪ್ರಕರಣದ ಕುರಿತು ನನ್ನ ಗಮನಕ್ಕೆ ಬಂದಿಲ್ಲ, ಈಗಷ್ಟೆ ನಾನು ನಗರಸಭೆ ಪ್ರಭಾರಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಸಂಬಂಧ ಕಡತ ಪರಿಶೀಲಿಸಿ ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಾಗುವುದು.

ಮಹೇಶ್, ಉಪವಿಭಾಗಾಧಿಕಾರಿ ಮತ್ತು ನಗರಸಭೆ ಪ್ರಭಾರಿ ಆಯುಕ್ತ

10/238 ಅಸೆಸ್ ಮೆಂಟ್ ಸಂಖ್ಯೆ ಅಕ್ರಮ ಖಾತೆ ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ನಾವು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಡಿಎಂಎ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಬೇಕಿದೆ.

ಸುಧಾ, ಯೋಜನಾ ನಿರ್ದೇಶಕರು, ಚಾಮರಾಜನಗರ

ಡಿ.ಕೆ. ಲಿಂಗರಾಜು, ಹಿಂದಿನ ಪೌರಾಯುಕ್ತ.

ಪ್ರದೀಪ್, ನೌಕರ.