ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರ ಪ್ರತಿಷ್ಠೆಯ ಕಲಹ ಇದೀಗ ರಾಷ್ಟ್ರ ಧ್ವಜಕ್ಕೆ ಅಪಮಾನ ವಾಗುವ ವರೆಗೂ ಬಂದು ತಲುಪಿದೆ.

ಕಳೆದ 2-3 ತಿಂಗಳಿನಿಂದ ಕರ್ನಾಟಕ ರಾಜ್ಯ ರೈತ ಸಂಘ (ಬಡಗಲಪುರ ನಾಗೇಂದ್ರ ಬಣ) ಹಾಗೂ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಸಾಮೂಹಿಕ ನಾಯಕತ್ವ ಬಣಗಳ ನಡುವೆ, ರೈತ ಸಂಘದ ಕಟ್ಟಡದ ವಿಚಾರವಾಗಿ ಕಲಹ ನಡೆಯುತ್ತಿದೆ.

ಕಟ್ಟಡಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿ ದೂರು ಸಹ ದಾಖಲಾಗಿದೆ. ಕಟ್ಟಡ ಮಾಲೀಕತ್ವ ತೀರ್ಮಾನ ಆಗುವವರೆಗೆ ಯಾರೊಬ್ಬರೂ ಸಂಘದ ಕಟ್ಟಡ ಪ್ರವೇಶಿಸದಂತೆ ಪೊಲೀಸರು ನಿರ್ದೇಶಿಸಿದ್ದರು.

ಆದರೆ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಸಿರು ಸೇನೆ, ಸಾಮೂಹಿಕ ನಾಯಕ್ವತ ಬಣದ ಸುನೀಲ್‌ ಕುಮಾರ್ ನೇತೃತ್ವದ ತಂಡ ಕಟ್ಟಡ ಆವರಣದಲ್ಲಿ ಬೆಳಗ್ಗೆ 7.55 ಸುಮಾರಿಗೆ ಧ್ವಜಾರೋಹಣ ಮಾಡಿದ್ದರು. ಸೂರ್ಯಾಸ್ತವಾಗುವವರೆಗೆ ಧ್ವಜ ಕೆಳಗೆ ಇಳಿಸಬಾರದು. ಆದರೆ, ಬೆಳಗ್ಗೆ 11.55ಕ್ಕೆ ತ್ರಿವರ್ಣ ಧ್ವಜ ಕೆಳಗೆ ಇಳಿಸುವ ಮೂಲಕ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಈ ಕುರಿತು ಈಗಾಗಲೇ ಬಡಗಲಪುರ ನಾಗೇಂದ್ರ ಬಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಎಸ್‌ಪಿಗೆ ದೂರು ನೀಡುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.ಒಟ್ಟಿನಲ್ಲಿ ರೈತ ಸಂಘದ ಆಂತರಿಕ ಬಣ ಸಂಘರ್ಷ ಇದೀಗ ರಾಷ್ಟ್ರಧ್ವಜದ ವಿಚಾರಕ್ಕೂ ತಲುಪಿದ್ದು, ಧ್ವಜವನ್ನು ನಿಗದಿತ ಸಮಯಕ್ಕೂ ಮುನ್ನವೇ ಕೆಳಗಿಳಿಸಲಾಯಿತೇ ಎಂಬ ಆರೋಪದ ಕುರಿತು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.ಫೋಟೋ

ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ರೈತ ಸಂಘದ ಕಟ್ಟಡ