ವೈದ್ಯ ಸೀಟು ಕೊಡಿಸೋದಾಗಿ ವಂಚಿಸುತ್ತಿದ್ದ ಆರೋಪಿ ಸೆರೆ

| Published : Jul 16 2024, 12:41 AM IST

ಸಾರಾಂಶ

ದೇಶದಲ್ಲಿ ನೀಟ್ ಪರೀಕ್ಷೆ ಅಕ್ರಮ ನಡೆದಿರುವ ಬೆನ್ನಲ್ಲೇ, ಇದನ್ನೇ ಬಂಡವಾಳ ಮಾಡಿಕೊಂಡು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ₹1.30 ಕೋಟಿ ಎಗರಿಸಿ ಪರಾರಿಯಾಗಿದ್ದ ಅಂತಾರಾಜ್ಯ ಖದೀಮನನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದಲ್ಲಿ ನೀಟ್ ಪರೀಕ್ಷೆ ಅಕ್ರಮ ನಡೆದಿರುವ ಬೆನ್ನಲ್ಲೇ, ಇದನ್ನೇ ಬಂಡವಾಳ ಮಾಡಿಕೊಂಡು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ₹1.30 ಕೋಟಿ ಎಗರಿಸಿ ಪರಾರಿಯಾಗಿದ್ದ ಅಂತಾರಾಜ್ಯ ಖದೀಮನನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೆಲಂಗಾಣ ಮೂಲದ ಅರಗೊಂಡ ಅರವಿಂದ ಅಲಿಯಾಸ್ ಅರುಣಕುಮಾರ (43) ಬಂಧಿತ ಆರೋಪಿ. ಆತನಿಂದ ₹12.66 ಲಕ್ಷ ನಗದು ಹಾಗೂ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್ ಸೇರಿದಂತೆ ₹12,66,900 ಬೆಲೆಯ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪಾಸ್ ಮಾಡಿಸಿ, ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಸುಮಾರು 10ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮೋಸ ಮಾಡಿದ್ದಾನೆ. ಅವರಿಂದ ಸುಮಾರು ₹1,30,41,884 ಎಗರಿಸಿ ಪರಾರಿಯಾಗಿದ್ದ. ಇದರ ಜಾಡು ಹಿಡಿದ ಪೊಲೀಸರ ತಂಡ ಆರೋಪಿಯನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆ ಹಚ್ಚಿ ವಂಚಕನನ್ನು ಬಂಧಿಸಿದೆ.