ತರೀಕೆರೆಹೈನುಗಾರರುಗಳು ಗುಣಮಟ್ಟದ ಹಾಲು ನೀಡುವ ಮೂಲಕ ಹಾಸನ ಹಾಲು ಒಕ್ಕೂಟದೊಂದಿಗೆ ಹಾಲು ಉತ್ಪಾದಕರ ಏಳಿಗೆಗೂ ಕಾರಣಕರ್ತರಾಗಬಹುದು ಎಂದು ಹಾಸನ ಹಾಲು ಒಕ್ಕೂಟದ ಟೀಮ್ ಲೀಡರ್ ಸುರೇಶ್ ಕುಮಾರ್ ಹೇಳಿದ್ದಾರೆ.
ಕ್ಷೀರ ಸಂಜೀವಿನಿ ಹಂತ 5 ರ ಯೋಜನೆಯಡಿ ಹೈನುಗಾರರಿಗೆ ಮಾಹಿತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ತರೀಕೆರೆಹೈನುಗಾರರುಗಳು ಗುಣಮಟ್ಟದ ಹಾಲು ನೀಡುವ ಮೂಲಕ ಹಾಸನ ಹಾಲು ಒಕ್ಕೂಟದೊಂದಿಗೆ ಹಾಲು ಉತ್ಪಾದಕರ ಏಳಿಗೆಗೂ ಕಾರಣಕರ್ತರಾಗಬಹುದು ಎಂದು ಹಾಸನ ಹಾಲು ಒಕ್ಕೂಟದ ಟೀಮ್ ಲೀಡರ್ ಸುರೇಶ್ ಕುಮಾರ್ ಹೇಳಿದ್ದಾರೆ.
ತಣಿಗೆಬೈಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ನಡೆದ ಕ್ಷೀರ ಸಂಜೀವಿನಿ ಹಂತ -5 ರ ಯೋಜನೆಯಡಿ ಹೈನುಗಾರರಿಗೆ ಹಮ್ಮಿಕೊಂಡಿದ್ದ ಸಾಕು ಪ್ರಾಣಿಗಳ ಸಾಂಕ್ರಾಮಿಕ ರೋಗಗಳ ತಿಳುವಳಿಕೆ , ಸಾಕು ಪ್ರಾಣಿಗಳೊಂದಿಗೆ ಪಶು ಸಾಕಾಣೆದಾರರಿಗೆ ಇರಬೇಕಾದ ಬಾಂಧವ್ಯ ಮತ್ತು ಆರೋಗ್ಯ ಸಲಹೆ, ಲಿಂಗ ಸಮಾನತೆ, ಕಾನೂನಿನ ಅರಿವಿನ ಬಗ್ಗೆ ಸಂಬಂಧಿಸಿದ ತಜ್ಞರಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.1955 ರಲ್ಲಿ ಪ್ರಾರಂಭವಾದ ಕುಡಿಗೆ ಡೈರಿ ಇಂದು ಪ್ರತಿದಿನ 16650 ಲೀಟರ್ಗಳಷ್ಟು ಹಾಲನ್ನು ಶೇಖರಣೆ ಮಾಡುತ್ತಿದ್ದು, ತಣಿಗೆಬೈಲಿನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಚಿಕ್ಕಮಗಳೂರು ಜಿಲ್ಲೆಯ ಕಟ್ಟೆ ಕಡೆಯ ಭಾಗದ ಗ್ರಾಮೀಣ ಸಂಘ. ಇಂದು ಕೆ.ಎಂ.ಎಫ್ ನಿಂದ ಭಾರತ ದೇಶವಷ್ಟೇ ಅಲ್ಲದೇ ಹೊರ ದೇಶಗಳಾದ ಸಿಂಗಾಪುರ ಮುಂತಾದ ದೇಶಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಕೆ.ಎಂ.ಎಫ್ ನ ಕಡೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕಿ ಅಕ್ಕನಾಗಮ್ಮ ಮಾತನಾಡಿ ಇಂದು ಹೈನುಗಾರರು ನಾಟಿ ಹಸುಗಳೊಂದಿಗೆ ಎಮ್ಮೆ , ಸಿಂಧಿ ಹಸು, ಜರ್ಸಿ ಹಸುಗಳಿಂದಲೂ ಹಾಲನ್ನು ಸಂಗ್ರಹಿಸಿ ಡೈರಿಗೆ ನೀಡುತ್ತಿದ್ದು, ಎಚ್.ಎಫ್ ಜರ್ಸಿಗಳಂತಹ ಹೊರದೇಶದ ತಳಿ ರಾಸುಗಳು ಹೆಚ್ಚಿನ ಹಾಲನ್ನು ನೀಡಿದರೂ ಅವುಗಳಲ್ಲಿ ಕೊಬ್ಬಿನ ಅಂಶ ಮತ್ತು ಖನಿಜಾಂಶ ಗಳು ಕಡಿಮೆ ಇರುವ ಕಾರಣ ನಾಟಿ ಹಸು, ಎಮ್ಮೆಗಳ ಹಾಲಿನೊಂದಿಗೆ ಮಿಶ್ರಣ ಮಾಡಿ ಡೈರಿಗೆ ನೀಡಬೇಕು ಎಂದು ತಿಳಿಸಿದರು.ತಣಿಗೆ ಬೈಲು ಹಾಲು ಉತ್ಪಾದಕರ ಸಂಘದಿಂದ ಹೆಚ್ಚಿನ ಪ್ರಮಾಣದ ಹಾಲು ಒಕ್ಕೂಟಕ್ಕೆ ಕಳುಹಿಸಬೇಕು ಕೆಎಂಎಫ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಲಕ ಹಾಲನ್ನು ಸಂಗ್ರಹಿಸಿ ಸರ್ಕಾರದ ನಿಯಮದಂತೆ ಉತ್ತಮ ದರ ಮತ್ತು ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಇವುಗಳ ಸದುಪಯೋಗ ಪಡೆಯುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಂಡು ಸಹಕಾರ ಸಂಘ ಮತ್ತು ಒಕ್ಕೂಟದ ಅಭಿವೃದ್ಧಿಗೂ ಸಹಕಾರ ನೀಡಬೇಕು ಎಂದು ಹೇಳಿದರು.
ಸಮುದಾಯ ಆರೋಗ್ಯಾಧಿಕಾರಿ ಡಾ.ಮನು ಮಾತನಾಡಿ ಹೈನುಗಾರರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಿ ತಮ್ಮ ಸ್ವಂತಕ್ಕೆ ಉಪಯೋಗಿಸುವ ಮೂಲಕ ಆದಾಯದ ಜೊತೆಗೆ ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳ ಬಹುದಾಗಿದೆ. ಹಾಲಿನ ಸೇವನೆಯಿಂದ ರೋಗ, ನಿರೋಧಕ ಶಕ್ತಿ ಹೆಚ್ಚಿಸಿಕೊಂಡು, ಬಿಪಿ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಬಲ್ ಸೇರಿದಂತೆ ಸುಲಭವಾಗಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಪ್ರತಿಯೊಬ್ಬರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ಮಹಿಳಾ ಹಾಲು ಉತ್ಪಾದಕರ ಸಂಘ ಅಧ್ಯಕ್ಷೆ ಸುಶೀಲಮ್ಮ ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಹೈನುಗಾರಿಕೆ ನಡೆಯುತ್ತಿದ್ದರೂ, ಹಾಸನ ಹಾಲು ಒಕ್ಕೂಟದ ಡೈರಿ ಇಲ್ಲದೆ ತೊಂದರೆ ಯಾಗುತ್ತಿದ್ದುದ್ದನ್ನು ಮನಗಂಡು ಎನ್.ಎಸ್. ಹನುಮಂತಪ್ಪ, ಕೆ. ಮಂಜು, ಕೆ. ರಾಮದಾಸ್, ಎಚ್. ಚಂದ್ರಶೇಖರ್, ಹೆಚ್.ರಾಜಪ್ಪ, ಎಸ್. ಪಾಪಣ್ಣ, ಮುಂತಾದವರು ಸಹಕಾರಿ ಧುರೀಣ ಎಸ್.ಡಿ ಸೋನಾಲ್ ಗೌಡರ ಮನವೊಲಿಸಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಿದರು. ಹಾಲು ಉತ್ಪಾದಕರು ಈ ಸಂಘದ ಉಪಯೋಗ ಪಡೆಯಬೇಕು ಎಂದು ಹೇಳಿದರು.
ವಕೀಲ ಬಿ ಶೇಖರನಾಯ್ಕ, ಪಶು ವೈದ್ಯ ಸಿದ್ದರಾಮೇಶ್, ಶಿಕ್ಷಕಿ ಪಾರ್ವತಮ್ಮ ಮಾತನಾಡಿದರು. ಕಾರ್ಯದರ್ಶಿ ಕಾವ್ಯ ಮಂಜುನಾಥ್ , ಸಂಘದ ಪದಾಧಿಕಾರಿಗಳು, ಹಾಸನ ಹಾಲು ಒಕ್ಕೂಟದ ಅಧಿಕಾರಿ ವರ್ಗದವರು, ವಿವಿಧ ಇಲಾಖಾ ಅಧಿಕಾರಿಗಳು, ತಣಿಗೇಬೈಲು ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಧರು ಭಾಗವಹಿಸಿದ್ದರು.-
18ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ತಣಿಗೆಬೈಲು ಮಹಿಳಾ ಸ್ವ ಸಹಾಯ ಸಂಘದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸುಶೀಲಮ್ಮ ಹನುಮಂತಪ್ಪ , ವೈದ್ಯರಾದ ಡಾ. ಸಿದ್ದರಾಮೇಶ್,ಡಾ. ಮನು, ಸುರೇಶ್ ಕುಮಾರ್, ಅಕ್ಕನಾಗಮ್ಮ ಮತ್ತಿತರರು ಭಾಗವಹಿಸಿದ್ದರು.