ತಾಳಿಕೋಟಿ ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ರೈತ ನಿಂಗಪ್ಪ ಬಸಪ್ಪ ಹೆಬ್ಬಾಳ ಅವರ ಎತ್ತುಗಳು ೨೦ ಎಕರೆ ಹತ್ತಿ ಹೊಲದಲ್ಲಿ ಸತತ ೧೦ ಗಂಟೆಗಳ ಕಾಲ ನಿರಂತರವಾಗಿ ಹರಗಿಸಾಧನೆ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದವು.

ಕನ್ನಡಪ್ರಭ ವಾರ್ತೆ ತಾಳಿಕೋಟಿ

ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ರೈತ ನಿಂಗಪ್ಪ ಬಸಪ್ಪ ಹೆಬ್ಬಾಳ ಅವರ ಎತ್ತುಗಳು ೨೦ ಎಕರೆ ಹತ್ತಿ ಹೊಲದಲ್ಲಿ ಸತತ ೧೦ ಗಂಟೆಗಳ ಕಾಲ ನಿರಂತರವಾಗಿ ಹರಗಿಸಾಧನೆ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದವು.

ಬೆಳಗ್ಗೆಯಿಂದಲೇ ಎತ್ತುಗಳನ್ನು ಸಿದ್ಧಪಡಿಸಿ ಹೊಲಕ್ಕೆ ಕರೆದುಕೊಂಡು ಹೋಗಲಾಗಿತ್ತು. ಸುಮಾರು ೨೦ ಎಕರೆ ವಿಸ್ತೀರ್ಣದ ಹತ್ತಿ ಹೊಲದಲ್ಲಿ ಎತ್ತುಗಳು ಯಾವುದೇ ಅಡಚಣೆಯಿಲ್ಲದೆ ನಿರಂತರವಾಗಿ ಹರಗಿದವು. ಸಾಧನೆ ಪೂರ್ಣಗೊಂಡ ನಂತರ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಎತ್ತುಗಳಿಗೆ ವಿವಿಧ ಬಣ್ಣಗಳ ಅಲಂಕಾರ, ಹೂವಿನ ಮಾಲೆಗಳು ಹಾಗೂ ಸಾಂಪ್ರದಾಯಿಕ ಶೃಂಗಾರ ಮಾಡಲಾಗಿತ್ತು. ಹಲಗಿ ವಾದ್ಯಗಳೊಂದಿಗೆ ಎತ್ತುಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಮೆರವಣಿಗೆಯ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಹಲಗಿ ವಾದ್ಯದ ಸದ್ದು, ಗ್ರಾಮಸ್ಥರ ಹರ್ಷೋದ್ಗಾರ ಹಾಗೂ ಅಲಂಕರಿಸಲ್ಪಟ್ಟ ಎತ್ತುಗಳ ಮೆರವಣಿಗೆಯಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಅನೇಕ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಗ್ರಾಮದ ಮುಖಂಡರಾದ ನಿಂಗಪ್ಪ ಬಸಪ್ಪ ಹೆಬ್ಬಾಳ, ಶಶಿಕುಮಾರ ವಡಗೇರಿ, ಚನ್ನವೀರ ಕುಳಗೇರಿ, ಶಂಕ್ರಪ್ಪ ಚೌದ್ರಿ, ಇಷ್ಟಲಿಂಗ ಹೆಬ್ಬಾಳ, ಅಪ್ಪು ಕುಳಗೇರಿ, ಈರಣ್ಣ ಅವಟಿ, ಕಾಶೀನಾಥ ಇಬ್ರಾಹಿಂಪುರ, ಕಾಶೀನಾಥ ಕುಳಗೇರಿ ಇತರರು ಇದ್ದರು.