ಮಹಿಳೆಯರ ಗೌರವ ಮತ್ತು ಸಮಾನ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಹಿರಿಯ ನಾಗರಿಕರಾದ ನೀಲಮ್ಮ ಉದಾಸಿ ತಿಳಿಸಿದರು.

ಹಾನಗಲ್ಲ: ಮಹಿಳೆಯರು ಧೈರ್ಯ, ಸಹನೆ ಮತ್ತು ಆತ್ಮವಿಶ್ವಾಸದಿಂದ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಮಹಿಳೆಯರ ಗೌರವ ಮತ್ತು ಸಮಾನ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಹಿರಿಯ ನಾಗರಿಕರಾದ ನೀಲಮ್ಮ ಉದಾಸಿ ತಿಳಿಸಿದರು.

ನಗರದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಸಮಾಜದ ಶಕ್ತಿ ಮತ್ತು ಪ್ರಗತಿಯ ಪ್ರತೀಕವಾಗಿದ್ದು, ಶಿಕ್ಷಣ, ಸಂಸ್ಕೃತಿ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾಗಿದೆ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾಳೆ. ಅದಕ್ಕಾಗಿ ಮಹಿಳೆಗೆ ಭಾರತದಲ್ಲಿ ಶ್ರೇಷ್ಠ ಸ್ಥಾನ ನೀಡಲಾಗಿದೆ. ಕಾನೂನಿನ ಮೂಲಕ ಸಾಮಾಜಿಕ ನ್ಯಾಯ, ಮಹಿಳಾ ಮೀಸಲಾತಿ ನೀಡಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಮಾತನಾಡಿ, ಮಹಿಳೆ ಸಮಾಜದ ಬಹುಮುಖ್ಯ ಅಂಗವಾಗಿದ್ದು, ಸುಶಿಕ್ಷಿತಳಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಆ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಇಂದು ಎಲ್ಲ ರಂಗಗಳಲ್ಲಿ ಮಹಿಳೆಯ ಸಾಧನೆ ಸಮಾನತೆ ತೋರಿಸುತ್ತಿದೆ. ಕೃಷಿ, ಶಿಕ್ಷಣ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕಡೆಗಳಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚುತ್ತ ಹೋಗುತ್ತಿದೆ ಎಂದರು.

ಅದ್ಯಕ್ಷತೆ ವಹಿಸಿ ಡಾ. ಸದಾಶಿವಪ್ಪ ಎನ್ ಮಾತನಾಡಿ, ಸಮಾಜ ಮಹಿಳೆಯರನ್ನು ಸದಾ ಗೌರವಿಸುತ್ತಿದ್ದು, ಮಹಿಳೆ ದೇವತೆ ಸ್ವರೂಪವಾಗಿದ್ದಾಳೆ. ತಾಳ್ಮೆ ಸ್ಮರಣ ಶಕ್ತಿ, ಎಲ್ಲವನ್ನು ನಿಭಾಯಿಸುವ ಶಕ್ತಿ ಹೊಂದಿರುವುದು ಹೆಣ್ಣು ಮಾತ್ರ. ಸಮುದಾಯದಲ್ಲಿ ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ, ಅತೃಪ್ತಿಗೆ ಮೂಲ ಕಾರಣ. ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಉತ್ತಮ ಫಲ ಪಡೆಯಬೇಕು. ಹಾಗೇಯೆ ಮಹಿಳಾ ದಿನಾಚರಣೆಗಳು ವೇದಿಕೆ ಕಾರ್ಯಕ್ರಮಗಳಾಗದೇ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ, ಆರೋಗ್ಯ ತಪಾಸಣಾ ಶಿಬಿರಗಳಾಗಿ ಮಾರ್ಪಟ್ಟು ಉಪಯುಕ್ತವಾಗಲಿ, ಬರಲಿರುವ ದಿನಗಳಲ್ಲಿ ಹೀಗೆ ಕಾರ್ಯಕ್ರಮ ರೂಪಿಸಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಪ್ರಕಾಶ ಜಿ.ವಿ., ಪ್ರಶಿಕ್ಷಣಾರ್ಥಿ ಆಶಾ ಬಿ., ಲಾವಣ್ಯ, ವರ್ಷಾ ಹರಿಶೆಟ್ರು, ಸಿರಿನಾಬಾನು ಅಂಗಡಿ ಮಹಿಳೆಯರ ಸಾಧನೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ತಮಿಳುನಾಡಿನ ಎನ್. ಅಂಬಿಕಾ ಅವರ ನಿಜ ಜೀವನದ ಚರಿತ್ರೆಯನ್ನು ಕಿರು ನಾಟಕದ ಮೂಲಕ ಬಾಗ್ಯಲಕ್ಷ್ಮೀ ಮೇಘಾ ಮತ್ತು ಸಂಗಡಿಗರು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಡಾ. ಹರೀಶ ತಿರಕಪ್ಪ, ಡಾ. ರುದ್ರೇಶ. ಬಿ.ಎಸ್., ಪ್ರೊ. ದಿನೇಶ ಆರ್., ಡಾ. ವಿಶ್ವನಾಥ ಬೊಂದಾಡೆ, ಡಾ. ರಾಘವೇಂದ್ರ ಮಾಡಳ್ಳಿ, ಡಾ. ಪ್ರಕಾಶ ಹುಲ್ಲೂರ, ಡಾ. ಜಿತೇಂದ್ರ ಜಿ.ಟಿ., ಮಹೇಶ ಅಕ್ಕಿವಳ್ಳಿ, ಮಂಜುನಾಥ ನಿಂಗೋಜಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಸುನಿತಾ ಪಿ. ಮತ್ತು ಅನಿತಾ ಬುದ್ದಪ್ಪನವರ ಪ್ರಾರ್ಥಿಸಿದರು. ಶ್ರುತಿ ಪಾಟೀಲ ಸ್ವಾಗತಿಸಿದರು. ಸ್ನೇಹಾ ಪ್ಯಾಟಿ ನಿರೂಪಿಸಿದರು. ಶಿವಲೀಲಾ ಪಾಟೀಲ ವಂದಿಸಿದರು.