ನಿಷ್ಠೆಯಿಂದ ಕಾರ್ಯನಿರ್ವಹಿಸಿ ಪಕ್ಷ ಬಲಪಡಿಸಿ: ರೂಪಾಲಿ ನಾಯ್ಕ

| Published : Mar 06 2024, 02:20 AM IST

ಸಾರಾಂಶ

ಹಿಂದೆ ಕಾರವಾರದಲ್ಲಿ ಸಂಘಟನೆ ಕಷ್ಟವಾಗಿತ್ತು. ಸಭೆಗಳಿಗೆ ಬೆರಳೆಣಿಕೆಯಷ್ಟು ಜನರು ಇರುತ್ತಿದ್ದರು. ಕ್ರಮೇಣ ಸಂಘಟನೆ ಬೆಳೆಯುತ್ತ ಇಂದು ಬೃಹತ್ತಾಗಿ ಬೆಳೆದಿದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ‌ಪಕ್ಷವಾಗಿ ಬಿಜೆಪಿ ಬೆಳೆದಿದೆ.

ಕಾರವಾರ:

ಪಕ್ಷ ನೀಡುವ ಜವಾಬ್ದಾರಿಯನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಪಕ್ಷವನ್ನು ಮತ್ತಷ್ಟು ಬಲಿಷ್ಠಪಡಿಸಬೇಕು ಎಂದು ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲದ ಪುನರಾಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಕಾರವಾರದಲ್ಲಿ ಸಂಘಟನೆ ಕಷ್ಟವಾಗಿತ್ತು. ಸಭೆಗಳಿಗೆ ಬೆರಳೆಣಿಕೆಯಷ್ಟು ಜನರು ಇರುತ್ತಿದ್ದರು. ಕ್ರಮೇಣ ಸಂಘಟನೆ ಬೆಳೆಯುತ್ತ ಇಂದು ಬೃಹತ್ತಾಗಿ ಬೆಳೆದಿದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ‌ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದರು.

ಬೂತ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಪೇಜ್‌ ಪ್ರಮುಖರು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜಾರಿಗೆ ತಂದ ಯೋಜನೆಯನ್ನು ಮನೆ-ಮನೆಗೆ ತಲುಪಿಸಬೇಕು. ಇಂದಿನಿಂದಲೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಸಂಘಟನೆಗೆ ಎಲ್ಲರೂ ಶಕ್ತಿ ತುಂಬಬೇಕು. ಅದರಂತೆ ಎಲ್ಲ ಮೋರ್ಚಾಗಳು ಅತ್ಯಂತ ಮಹತ್ವದ್ದಾಗಿದ್ದು, ಅವುಗಳನ್ನು ಬಲಿಷ್ಠಗೊಳಿಸಲು ಶ್ರಮಿಸಬೇಕು. ಸಂಘಟನೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದರು.ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲದ ಸುಭಾಷ ಗುನಗಿ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಮತ್ತಿತರರು ಇದ್ದರು.

ಕಾರವಾರ ನಗರ ಮಂಡಲ ಅಧ್ಯಕ್ಷರಾಗಿ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲದ ಅಧ್ಯಕ್ಷರಾಗಿ ಸುಭಾಷ ಗುನಗಿ, ಮಹಿಳಾ ಮೊರ್ಚಾ ನಗರ ಮಂಡಲ ಅಧ್ಯಕ್ಷರಾಗಿ ವೈಶಾಲಿ ತಾಂಡೇಲ, ಗ್ರಾಮೀಣ ಮಂಡಲ ಅಧ್ಯಕ್ಷರಾಗಿ ಕಲ್ಪನಾ ನಾಯ್ಕ, ರೈತ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಗಿರಿಧರ ಗುನಗಿ ಮತ್ತಿತರು ಪದಗ್ರಹಣ ಮಾಡಿದರು.