ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ನಾಗರಿಕರು ಕಸವನ್ನು ಪಾಲಿಕೆಯ ವಾಹನದಲ್ಲಿಯೇ ಹಾಕದೇ ಬೇರೆಡೆ ಕಸ ಹಾಕಿದರೆ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.ಥಣಿಸಂದ್ರದ ಪೊಲೀಸ್ ತರಬೇತಿ ಶಾಲೆ ಮತ್ತು ರಾಷ್ಟ್ರೋತ್ಥಾನ ಶಾಲೆಯ ನಡುವೆ ಇದ್ದ 100ನೇ ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ ಮಾಡಿದ ನೆನಪಿನಲ್ಲಿ ಗೋಡೆಗೆ ಬಣ್ಣ ಬಳಿದ ನಂತರ ಮಾತನಾಡಿ, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಮಾತನಾಡಿ, ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ಎನ್ಜಿಒಗಳ ಜೊತೆ ಸೇರಿ ನಡೆಸಿರುವ ಈ ವಿಶೇಷ ಅಭಿಯಾನ ಯಶಸ್ವಿಯಾಗಿದೆ. ಸಾರ್ವಜನಿಕರು ಕಸದ ವಾಹನಗಳಿಗೆ ಕಸ ಕೊಡಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದು, ರಾಜಕಾಲುವೆಗಳಲ್ಲಿ ಕಸ ಎಸೆಯುವುದು ತರವಲ್ಲ. ನಗರ ಸ್ವಚ್ಛವಾಗಿಡಲು ಸಾರ್ವಜನಿಕರೂ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.ಅಭಿಯಾನದಡಿ ಕಸ ಹಾಗೂ ತ್ಯಾಜ್ಯ ತೆರವು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆಬದಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಗೋಡೆಗಳ ಸೌಂದರ್ಯೀಕರಣ, ಹಸಿರೀಕರಣ ಹಾಗೂ ಸಾರ್ವಜನಿಕ ಬಳಕೆಗೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 5ರಂದು ಆರಂಭಗೊಂಡ 100 ವಿಶೇಷ ಸ್ವಚ್ಛತಾ ಅಭಿಯಾನದಡಿ 45 ದಿನಗಳಲ್ಲಿ ಉತ್ತರ ನಗರ ಪಾಲಿಕೆ ವ್ಯಾಪ್ತಿಯ 100 ಕಸದ ಬ್ಲಾಕ್ಸ್ಪಾಟ್ಗಳನ್ನು ನಿರ್ಮೂಲನೆಗೊಳಿಸುವ ಗುರಿ ಹೊಂದಲಾಗಿತ್ತು. ಅದರಂತೆ, ಇಂದು 100ನೇ ಕಸದ ಬ್ಲಾಕ್ಸ್ಪಾಟ್ನ್ನು ಸಂಪೂರ್ಣವಾಗಿ ಕಸಮುಕ್ತಗೊಳಿಸಿ, ಸೌಂದರ್ಯೀಕರಣ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.
ಈ ವೇಳೆ ಅಪರ ಆಯುಕ್ತರು (ಕಂದಾಯ - ಪ್ರಭಾರ) ಹಾಗೂ ಜಂಟಿ ಆಯುಕ್ತೆ ಪಲ್ಲವಿ, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಡಿಜಿಎಂ ರಶ್ಮಿ ಸೇರಿದಂತೆ ಪಾಲಿಕೆಯ ಸಿಬ್ಬಂದಿ, ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.