ಸಾರಾಂಶ
ದೇಶದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಕ್ರಮವನ್ನು ಜಿಲ್ಲಾ ಛಲವಾದಿ ಮಹಾಸಭಾ ಖಂಡಿಸುತ್ತದೆ ಎಂದು ಮಹಾಸಭಾ ಅಧ್ಯಕ್ಷ ಎನ್.ರುದ್ರಮುನಿ ಹೇಳಿದ್ದಾರೆ.
- ಸಹನೆ ಕಳೆದುಕೊಳ್ಳದೇ ಸಿಜೆಐ ದಿಟ್ಟತನ ಪ್ರದರ್ಶನ: ಶ್ಲಾಘನೆ
- - -ದಾವಣಗೆರೆ: ದೇಶದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಕ್ರಮವನ್ನು ಜಿಲ್ಲಾ ಛಲವಾದಿ ಮಹಾಸಭಾ ಖಂಡಿಸುತ್ತದೆ ಎಂದು ಮಹಾಸಭಾ ಅಧ್ಯಕ್ಷ ಎನ್.ರುದ್ರಮುನಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಮತ್ತು ಮತ್ತೊಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ ಪೀಠ ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿತ್ತು. ಈ ವೇಳೆ ಏಕಾಏಕಿ ನ್ಯಾಯಾಧೀಶರ ಪೀಠದ ಮೇಲೆ ವಕೀಲ ರಾಕೇಶ್ ಕಿಶೋರ್ ಯಾವುದೋ ದುರುದ್ದೇಶದಿಂದ ಶೂ ಎಸೆದಿದ್ದಾರೆ. ಆಧರೂ, ಮುಖ್ಯ ನ್ಯಾಯಾಧೀಶರು ಸಹನೆ ಕಳೆದುಕೊಳ್ಳದೇ, ಇಂತಹ ಘಟನೆಗಳಿಗೆ ನಾನು ವಿಚಲಿತ ಆಗುವುದಿಲ್ಲ ಎಂದು ತಿಳಿಸಿದ್ದು ಶ್ಲಾಘನೀಯ. ಘಟನೆಯಲ್ಲಿ ವಕೀಲನ ವರ್ತನೆ ಅಕ್ಷಮ್ಯ ಎಂದರು.ಇಂತಹ ಘಟನೆಗಳು ದೇಶದ ಯಾವುದೇ ಭಾಗದಲ್ಲಿ ನಡೆಯದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಈ ಘಟನೆಗೆ ಕಾರಣವಾದವರ ಮೇಲೆ ಅತ್ಯಂತ ಕಠಿಣ ಕ್ರಮ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡಲೇ ವಕೀಲ ರಾಕೇಶ್ ಕಿಶೋರ್ ಸದಸ್ಯತ್ವ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ನಡೆಯುತ್ತಿರುವ ಹಿಂದುಳಿದ ವರ್ಗಗಳ ಆಯೋಗದಿಂದ ಆರ್ಥಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಅ.12ರವರೆಗೆ ವಿಸ್ತರಿಸಿರುವುದರಿಂದ ನಮ್ಮ ಸಮುದಾಯದ ಬಂಧುಗಳು ಯಾರಾದರೂ ಬಿಟ್ಟುಹೋಗಿದ್ದರೆ ಮತ್ತು ಸಮೀಕ್ಷೆಯಲ್ಲಿ ಭಾಗವಹಿಸದಿದ್ದರೆ ಅಂತಹವರು ಕೂಡಲೇ ಬಿ. 27.1ರಲ್ಲಿ ಬರುವ "ಛಲವಾದಿ " ಎಂದೇ ಬರೆಸಲು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಮಾಜದ ಗೌರವಾಧ್ಯಕ್ಷ ಎಸ್.ಶೇಖರಪ್ಪ, ರವಿ ದೊಡ್ಡಮನಿ, ಜಯಪ್ರಕಾಶ್, ಎಲ್.ಟಿ.ಮಧುಸೂದನ, ಗಿರೀಶ್ ಹಳ್ಳಳ್ಳಿ, ಎ.ಡಿ.ಕೊಟ್ರಬಸಪ್ಪ, ಅಂಜಿನಪ್ಪ, ಇದ್ದರು.
- - --8ಕೆಡಿವಿಜಿ33:
ಛಲವಾದಿ ಮಹಾಸಭಾ ಮುಖಂಡ ಎನ್.ರುದ್ರಮುನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.