ಸಾರಾಂಶ
ನಗರದ ಎಲ್ಲ ವಾರ್ಡ್ಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಬಡಜನರ ಮನೆ ಮುಂದೆಯೇ ಆರೋಗ್ಯ ಸೇವೆ ನೀಡಲು ಕ್ರಮ ವಹಿಸಲಾಗುವುದು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಎಲ್ಲ ವಾರ್ಡ್ಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಬಡಜನರ ಮನೆ ಮುಂದೆಯೇ ಆರೋಗ್ಯ ಸೇವೆ ನೀಡಲು ಕ್ರಮ ವಹಿಸಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.ನಗರದ 2ನೇ ವಾರ್ಡಿನ ಪಾಪಯ್ಯ ಸಭಾಂಗಣ ಬಳಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ನಾರಾ ಭರತ್ ರೆಡ್ಡಿ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಚಿಕಿತ್ಸೆ ಬಹಳ ದುಬಾರಿ ಆಗಿರುವ ಈ ದಿನಗಳಲ್ಲಿ ಆರೋಗ್ಯ ಶಿಬಿರಗಳು ಹೆಚ್ಚು ಮಹತ್ವ ಪಡೆದಿವೆ. ಇಂತಹ ಶಿಬಿರಗಳ ಪ್ರಯೋಜನವನ್ನು ಸ್ಥಳೀಯರು ಪಡೆದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ದೊರೆಯುವಂತಾಗಬೇಕು ಎಂಬ ಆಶಯದಲ್ಲಿ ವಾರ್ಡ್ವಾರು ಶಿಬಿರ ಆಯೋಜನೆಯ ಚಿಂತನೆ ನಡೆದಿದೆ ಎಂದರಲ್ಲದೆ, ವೈದೇಹಿ ಆಸ್ಪತ್ರೆಯ ಸಂಸ್ಥಾಪಕರು ನಮ್ಮ ಕುಟುಂಬದ ಸ್ನೇಹಿತರಾಗಿದ್ದು ಆಸ್ಪತ್ರೆಯ ಸೇವೆ ಶ್ಲಾಘನೀಯ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು.ಸಂಘಟಕ ಅಬ್ದುಲ್ ರಜಾಕ್ ಮಾತನಾಡಿ, ಬಳ್ಳಾರಿ ನಗರದ ಯಾವುದೇ ವಾರ್ಡಿನಲ್ಲಿ ಅನಾರೋಗ್ಯ ಪೀಡಿತರಾಗಿರುವ ಬಡವರ ನೆರವಿಗೆ ನಿಲ್ಲುವ ಯೋಜನೆ ಇದೆ. ಈ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡು ಶಸ್ತ್ರ ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ, ಅಂಥವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. ಶಾಸಕ ನಾರಾ ಭರತ್ ರೆಡ್ಡಿಯವರ ಬೆಂಬಲದೊಂದಿಗೆ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಸರ್ಜನ್ ಡಾ. ಬಸರೆಡ್ಡಿ, ಪಾಪಯ್ಯ, ಶಮೀಮ್ ಜೋಹ್ರಾ, ಲತಾ ಚಾನಾಳ್ ಶೇಖರ್, ವಿಜಯಲಕ್ಷ್ಮೀ, ವೈದೇಹಿ ಆಸ್ಪತ್ರೆಯ ಪ್ರತಿನಿಧಿಗಳು ಮತ್ತಿತರರಿದ್ದರು.ವೈದೇಹಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಲ್ಲಿಕಾರ್ಜುನ ಅಚ್ಚೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
----------------27 ಬಿಆರ್ವೈ 1
ಬಳ್ಳಾರಿಯ ಪಾಪಯ್ಯ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿದರು.