ಸಾರಾಂಶ
ಮಳೆಗಾಲದಲ್ಲಿ ಹಿರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಸಂಕೇಶ್ವರ ಭಾಗದ ಹರಗಾಪೂರ, ಮತ್ತಿವಾಡ, ನಾಗನೂರ, ಹಿಟ್ನಿ ಮತ್ತು ಬೈರಾಪೂರ ಕೆರೆಗಳಿಗೆ 70.4 ಎಂಸಿಎಫ್ಟಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಮಳೆಗಾಲದಲ್ಲಿ ಹಿರಣ್ಯಕೇಶಿ ನದಿಯಿಂದ ಇವುಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.ತಾಲೂಕಿನ ಸಂಕೇಶ್ವರ ಭಾಗದ ಐದು ಕೆರೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಹಿರಣ್ಯಕೇಶಿ ನದಿಯಿಂದ ಕೆಲವೇ ಕಿ.ಮೀ ಅಂತರದಲ್ಲಿ ಇರುವ ಈ ಗ್ರಾಮಗಳಿಗೆ ನೀರಾವರಿ ಸೌಕರ್ಯ ಇಲ್ಲದಾಗಿ ರೈತರು ಕೇವಲ ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದರು. ಈ ಕೆರೆಗಳ ನಿರ್ಮಾಣದಿಂದ ಈ ಭಾಗ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆ ಮತ್ತು ತರಕಾರಿ ಬೆಳೆಯುತ್ತಿದ್ದಾರೆ ಎಂದರು.
ಕೆರೆ ತುಂಬಿಸುವ ಪೈಪಲೈನ್ಗಳನ್ನು ಕೆಲ ರೈತರು ಹಾಳು ಮಾಡಿ, ಕೇವಲ ತಮ್ಮ ಕೆರೆಗಳಿಗೆ ಮಾತ್ರ ನೀರು ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ. ನಾವು ಬದುಕಬೇಕು, ಮತ್ತೊಬ್ಬರನ್ನು ಬೆಳೆಸಬೇಕು ಎಂಬ ಮನೋಭಾವ ರೈತರಲ್ಲಿ ಬರಬೇಕು. ಇಂಥ ಕೃತ್ಯ ಎಸಗಿದವರ ಮೇಲೆ ನಿರ್ಧಾಕ್ಷ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿದ ಕೆರೆಗಳು ಮತ್ತು ಅವುಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದು ಇದೀಗ ಫಲ ನೀಡುತ್ತಿದೆ. ಉಮೇಶ ಕತ್ತಿ ಅಗಲಿಕೆಯ ಮೇಲೂ ಅವರು ಜನಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ಸಂಜಯಕುಮಾರ ಮಾಳಗಿ, ಗುತ್ತಿಗೆದಾರ ಬಸವರಾಜ ಗಂಗಣ್ಣವರ, ಮುಖಂಡರಾದ ಗಜಾನನ ಕ್ವಳ್ಳಿ, ರೋಹನ ನೇಸರಿ, ನಂದು ಮುಡಶಿ, ಪ್ರಶಾಂತ ಪಾಟೀಲ, ವಿಜಯ ಶೇರೇಕರ, ಪ್ರಕಾಶ ಹಾಲಟ್ಟಿ, ಅಶೋಕ ಹಿರೇಕೋಡಿ, ಎನ್.ಬಿ.ಪಾಟೀಲ, ಅಣ್ಣಪ್ಪಾ ಪಾಟೀಲ, ಚಂದರ ಪಾಟೀಲ, ಕಿರಣ ಪಾಟೀಲ, ನಾನಾ ಪಾಟೀಲ, ಮಹಾದೇವ ಗೋಟೂರೆ, ದೇವಾನಂದ ಚವ್ಹಾಣ, ಹನುಮಂತ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.