ವಿಧಾನ ಪರಿಷತ್‌: ಬೆಂಗಳೂರು ದಕ್ಷಿಣ (ರಾಮನಗರ) ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಗೆ ಹಲವು ಕ್ರಮ ಕೈಗೊಂಡಿದ್ದು, ಹೆಚ್ಚುವರಿಯಾಗಿ ಇನ್ನೊಂದು ಆನೆ ನಿರೋಧಕ ಕಂದಕ ನಿರ್ಮಾಣ ಸಂಬಂಧ ಪ್ರಸ್ತಾವನೆ ಪಡೆದು ನಿರ್ಮಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

ಕಾಂಗ್ರೆಸ್ಸಿನ ಎಸ್‌. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 2025-26ನೇ ಸಾಲಿನಲ್ಲಿ ಆನೆ ದಾಳಿಯಿಂದ ಬನ್ನೇರುಘಟ್ಟ ಹಾಗೂ ರಾಮನಗರ ವಿಭಾಗದಲ್ಲಿ ನಾಲ್ವರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಅದೇ ರೀತಿ ಬನ್ನೇರುಘಟ್ಟ ವಿಭಾಗದಲ್ಲಿ 159 ಆಸ್ತಿ ಹಾನಿ ಪ್ರಕರಣಗಳಲ್ಲಿ 11,23,600 ರು. ಪರಿಹಾರ, 1379 ಬೆಳೆ ಹಾನಿ ಪ್ರಕರಣದಲ್ಲಿ 1,23,50,999 ರು. ಪರಿಹಾರ, ರಾಮನಗರ ವಿಭಾಗದಲ್ಲಿ 472 ಆಸ್ತಿ ಹಾನಿ ಪ್ರಕರಣದಲ್ಲಿ 23,74,580 ರು. ಹಾಗೂ 3625 ಬೆಳೆಹಾನಿ ಪ್ರಕರಣದಲ್ಲಿ 2,31,50,624 ರು. ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

ಕಾಡಾನೆ ಹಾವಳಿ ತಡೆಗೆ ಈಗಾಗಲೇ ಆನೆ ಕಾರ್ಯಪಡೆ ರಚನೆ, ಕಾಡಂಚಿನ ರೈತರ ಜಮೀನುಗಳಿಗೆ ಆನೆ ಸೇರಿದಂತೆ ಕಾಡು ಪ್ರಾಣಿ ಬಾರದಂತೆ ತಡೆಯಲು ರೈಲ್ವೆ ಹಳಿಗಳ ಬ್ಯಾರಿಕೇಡ್‌, ಸೋಲಾರ ತಂತಿ ಬೆಲೆ, ಆನೆ ನಿರೋಧಕ ಕಂದಕ ನಿರ್ಮಾಣ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಎರಡು ವಿಭಾಗಗಲ್ಲಿ 13.68 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಒಟ್ಟು 52.5 ಕಿಮೀ ರೈಲ್ವೆ ನಿರ್ಮಾಣ ಅಗತ್ಯವಿದ್ದು 89.32 ಕೋಟಿ ರು. ಅನುದಾನ ಅಗತ್ಯವಿದ್ದು, ಹಣದ ಲಭ್ಯತೆ ಮೇರೆಗೆ ಹಂತ ಹಂತವಾಗಿ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.