ರಾಮನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಫಲಾನುಭವಿಯಾಗಿ, ತದನಂತರದಲ್ಲಿ ವಯೋಸಹಜ ಸೇರಿದಂತೆ ಇತರೆ ಕಾರಣಗಳಿಂದ ಮೃತರಾದ ಮಹಿಳೆಯರ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ರಾಜು ಸೂಚನೆ ನೀಡಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಮರಣ ಹೊಂದಿದ 6,624 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 1,777 ಫಲಾನುಭವಿಗಳನ್ನು ಗೃಹಲಕ್ಷ್ಮೀ ಯೋಜನೆಯಿಂದ ಕೈಬಿಡಲಾಗಿದೆ. ಬಾಕಿ ಇರುವ 4,847 ಫಲಾನುಭವಿಗಳನ್ನು ಗೃಹಲಕ್ಷ್ಮೀ ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲು ಶೀಘ್ರವಾಗಿ ಕ್ರಮವಹಿಸುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದಿನೇಶ್ ಮಾತನಾಡಿ, ಚನ್ನಪಟ್ಟಣ ತಾಲೂಕಿನಲ್ಲಿ 1,700 ಫಲಾನುಭವಿಗಳು ಮರಣ ಹೊಂದಿದ್ದು, ಅದರಲ್ಲಿ 425 ಫಲಾನುಭವಿಗಳನ್ನು ಕೈಬಿಡಲಾಗಿದ್ದು, 1,275 ಫಲಾನುಭವಿಗಳು ಬಾಕಿ ಉಳಿದಿದ್ದಾರೆ. ಕನಕಪುರ ತಾಲ್ಲೂಕಿನಲ್ಲಿ 1,660 ಫಲಾನುಭವಿಗಳು ಮರಣ ಹೊಂದಿದ್ದು, ಅದರಲ್ಲಿ 418 ಫಲಾನುಭವಿಗಳನ್ನು ಕೈಬಿಡಲಾಗಿದ್ದು, 1,242 ಫಲಾನುಭವಿಗಳು ಬಾಕಿ ಉಳಿದಿದ್ದಾರೆ. ಹಾರೋಹಳ್ಳಿ ತಾಲೂಕಿನಲ್ಲಿ 398 ಫಲಾನುಭವಿಗಳು ಮರಣ ಹೊಂದಿದ್ದು, ಅದರಲ್ಲಿ 96 ಫಲಾನುಭವಿಗಳನ್ನು ಕೈಬಿಡಲಾಗಿದ್ದು, 302 ಫಲಾನುಭವಿಗಳು ಬಾಕಿ ಉಳಿದಿದ್ದಾರೆ ಎಂದರು.

ಮಾಗಡಿ ತಾಲೂಕಿನಲ್ಲಿ 1,375 ಫಲಾನುಭವಿಗಳು ಮರಣ ಹೊಂದಿದ್ದು, ಅದರಲ್ಲಿ 332 ಫಲಾನುಭವಿಗಳನ್ನು ಕೈಬಿಡಲಾಗಿದ್ದು, 1,043 ಫಲಾನುಭವಿಗಳು ಬಾಕಿ ಉಳಿದಿದ್ದಾರೆ. ರಾಮನಗರ ತಾಲ್ಲೂಕಿನಲ್ಲಿ 1,491 ಫಲಾನುಭವಿಗಳು ಮರಣ ಹೊಂದಿದ್ದು, ಅದರಲ್ಲಿ 506 ಫಲಾನುಭವಿಗಳನ್ನು ಕೈಬಿಡಲಾಗಿದ್ದು, 985 ಫಲಾನುಭವಿಗಳು ಬಾಕಿ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ 2,94,399 ಅರ್ಹ ಫಲಾನುಭವಿಗಳ ಪೈಕಿ 2,81,726 (95.70%) ಫಲಾನುಭವಿಗಳು ನೋಂದಣಿಯಾಗಿದ್ದು, ಉಳಿದ 12,673 (4.30%) ಫಲಾನುಭವಿಗಳ ನೋಂದಣಿಗೆ ಬಾಕಿ ಇರುತ್ತದೆ. 27 ಕಂತುಗಳಲ್ಲಿ ಅಂದರೆ 2025ರ ಡಿಸೆಂಬರ್ ಮಾಹೆಯವರೆಗೆ 2,68,612 ಫಲಾನುಭವಿಗಳಿಗೆ 1427,16,26,000 ರು.ಗಳನ್ನು ಪಾವತಿಸಲಾಗಿದೆ. 2026ರ ಜನವರಿ ಮಾಹೆಯ 28ನೇ ಕಂತನ್ನು ಇನ್ನೆರಡು ದಿನಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿದರು.


ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅವಶ್ಯವಿರುವ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದ ಅವರು ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಇಲಾಖೆಗಳು ಶ್ರಮಿಸಬೇಕು, ಯೋಜನೆಗೆ ಅರ್ಹರಿರುವ ಯಾವುದೇ ಫಲಾನುಭವಿಯು ಗ್ಯಾರಂಟಿ ಯೋಜನೆಯಿಂದ ಹೊರಗುಳಿಯಬಾರದು ಹಾಗೂ ಈ ಯೋಜನೆಯ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಸಹಕರಿಸಬೇಕು ಎಂದು ಕೆ.ರಾಜು ಹೇಳಿದರು.

ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಮಹದೇಶ್, ಎಸ್.ಸಿ. ಶೇಖರ್, ಸಿದ್ದೇಗೌಡ, ರಾಮನಗರ ತಾಲೂಕು ಅಧ್ಯಕ್ಷ ವಿ.ಎಚ್.ರಾಜು , ಮಾಗಡಿ ತಾಲೂಕು ಅಧ್ಯಕ್ಷ ಶಿವಣ್ಣ, ಜಿಲ್ಲಾ ಸಮಿತಿ ಸದಸ್ಯರಾದ ಶಿವಮಾದಯ್ಯ, ಎಂ. ಮಹದೇವ್, ಕಾಳಮ್ಮ, ವನಜಾ ಎಸ್.ಜಿ, ಶೋಭಾ , ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.

24ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆ.ರಾಜು ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.