ಶಿವಮೊಗ್ಗ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಕ್ರಿಯಾಶೀಲ ಚಟುವಟಿಕೆಗಳು ತುಂಬಾ ಪೂರಕ ಎಂದು ನಿವೃತ್ತ ಕಾರ್ಮಿಕ ಅಧಿಕಾರಿ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಚಾರಿಟೇಬಲ್‌ಟ್ರಸ್ಟ್‌ ನ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಅಭಿಮತ ವ್ಯಕ್ತಪಡಿಸಿದರು.ಶಿವಮೊಗ್ಗದ ರಾಜೇಂದ್ರ ನಗರದಲ್ಲಿರುವ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ''''''''ಚಿಕ್ಕ ಮಕ್ಕಳ ಗ್ರಾಜುಯೇಷನ್ ಸೆರಮನಿ 2024-25'''''''' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಕಲಿಕೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಕಲೆ ಬಹಳ ಮುಖ್ಯ. ಚಿಕ್ಕಮಕ್ಕಳಿಗೆ ಈಗ ಗ್ರಾಜುಯೇಷನ್ ಡೇ ಅವರ ಜೀವನದಲ್ಲಿ ಸದಾ ಹಸಿರಾಗಿರುತ್ತದೆ ಎಂದರು.

ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಹಿಂದೆ ಪದವಿ ಪಡೆದಾಗ ಈ ರೀತಿ ಕೋರ್ಟ್ ಹಾಗೂ ಪೇಟ ಹಾಕಿ ಗೌರವಿಸಿದ್ದನ್ನು ಮರೆಯಲು ಆಗುವುದಿಲ್ಲ. ಇಂದಿನ ಮಕ್ಕಳಿಗೆ ಈ ರೀತಿ ಗ್ರಾಜುಯೇಷನ್ ಡೇ ಮಾಡುವುದರಿಂದ ಚಿಕ್ಕ ಮಕ್ಕಳ ಪೋಷಕರು ಮತ್ತು ಮಕ್ಕಳಿಗೆ ಆತ್ಮವಿಶ್ವಾಸ ಹಾಗೂ ಉತ್ಸಾಹ ಹೆಚ್ಚುತ್ತದೆ. ಇದರಿಂದ ಅವರ ಕಲಿಕಾ ಸಾಮರ್ಥ್ಯವು ಕೂಡ ಹೆಚ್ಚುತ್ತದೆ ಎಂದರು.

ಟ್ರಸ್ಟಿನ ಕಾರ್ಯದರ್ಶಿ ನಾಗವೇಣಿ.ಎಸ್.ಆರ್ ಮಾತನಾಡಿ, ಇಂದು ಮಕ್ಕಳು ತುಂಬಾ ಬುದ್ಧಿವಂತರು ಮತ್ತು ಪರಿಣಿತರು ಇದ್ದಾರೆ. ಹಾಗಾಗಿ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಓದಲು ಹುರಿದುಂಬಿಸಬೇಕು. ಆಗ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಗ್ರಾಜುಯೇಷನ್ ಡೇ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸೂರ್ಯನಾರಾಯಣ, ಶಿಕ್ಷಕರು ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.