ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಾರ್ವಜನಿಕರು ಕ್ಷಯಮುಕ್ತ ನೂರು ದಿನಗಳ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ಷಯ ಮುಕ್ತ ಶ್ರೀರಂಗಪಟ್ಟಣ ತಾಲೂಕಿಗೆ ಸಹಕರಿಸಬೇಕು ಎಂದು ಪುರಸಭೆ ಸದಸ್ಯ ಗಂಜಾಂ ಶಿವು ಹೇಳಿದರು.ಪಟ್ಟಣದ ಸಂತೆಮಾಳ ಬೀದಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯ ಅಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶೇಷವಾಗಿ ಹೆಚ್ಚಿನ ಅಪಾಯದ ಅಂಚಿನಲ್ಲಿರುವ ಗುಂಪುಗಳಿಗೆ, ಭಾರತವು 2025ರ ವೇಳೆಗೆ ಟಿಬಿ ಕೊನೆಗೊಳಿಸಲು ಸಂಕಲ್ಪ ಮಾಡಿದ್ದು, ಕಾರಣ ಕ್ಷಯದ ಲಕ್ಷಣ ಇರುವವರು ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಂಡು ಅಭಿಯಾನಕ್ಕೆ ಸಹಕರಿಸಿ ಕ್ಷಯಮುಕ್ತ ತಾಲೂಕಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ, 100 ದಿನಗಳ ಕಾಲ ಈ ಅಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಪರೀಕ್ಷೆಗೆ ಹಾಗೂ ಚಿಕಿತ್ಸೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ಮಕ್ಕಳಿಂದ ಪಟ್ಟಣದ ಬೀದಿಯಲ್ಲಿ ಕ್ಷಯ ಒಡಿಸಿ, ದೇಶ ಗೆಲ್ಲಿಸಿ ಎಂಬ ಘೋಷಣೆ ಮೂಲಕ ಸಾರ್ವಜನಿಕರಿಗೆ ಜಾಥಾ ಮೂಲಕ ಅರಿವು ಮೂಡಿಸಿದರು.ಈ ವೇಳೆ ಮುಖಂಡರಾದ ಚಂದ್ರು, ಅಭಿನಂದನ್, ಚಂದ್ರಶೇಖರ, ಮಂಜುನಾಥ್, ಉಪ ಪ್ರಾಂಶುಪಾಲ ಅಶೋಕ್ ಕುಮಾರ್ ಬಿ, ಶಿಕ್ಷಕಿ ಸಪ್ನ, ಶ್ರೀನಿವಾಸ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಕ್ಷಯ ಮೇಲ್ವಿಚಾರಕ ಪ್ರಕಾಶ್, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಮಹೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ ಮಂಗಳ, ಅಂಗನವಾಡಿ ಕಾರ್ಯಕರ್ತೆ ವೇದಾವತಿ, ಆಶಾ ಕಾರ್ಯಕರ್ತೆ ಅಶ್ವಿನಿ ಸೇರಿದಂತೆ ಇತರರು ಇದ್ದರು.