ಕನ್ನಡಪ್ರಭ ವಾರ್ತೆ ಹನೂರು

ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಅಧಿಕಾರ ಗದ್ದುಗೆ ಹಿಡಿಯುತ್ತಿದ್ದಂತೆ ಪಟ್ಟಣದಲ್ಲಿ ವಿಜಯ್ ಅಭಿಮಾನಿಗಳು ಪಟಾಕಿ ಸಿಡಿಸಿ ಕಟೌಟ್ ನಿರ್ಮಾಣ ಮಾಡಿ ಸಂಭ್ರಮಿಸಿದರು. ಪಟ್ಟಣದ ಅನ್ನಪೂರ್ಣ ಹೋಟೆಲ್ ಮುಂಭಾಗ ಟಿವಿಕೆ ಪಕ್ಷದ ಮುಖಂಡ, ದಳಪತಿ ವಿಜಯ್ ಅವರ ಅಭಿಮಾನಿ, ಅನ್ನಪೂರ್ಣ ಹೋಟೆಲ್ ಮಾಲೀಕ ನಿರಂಜನ್ ನೇತೃತ್ವದಲ್ಲಿ ಹಲವು ಅಭಿಮಾನಿಗಳು, ವಿಜಯ್ ಅವರ 15 ಅಡಿ ಕಟೌಟ್ ಅಳವಡಿಸಿ, ಹಾರ ತುರಾಯಿ ಹಾಕಿ, ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ಮಾತನಾಡಿದ ನಿರಂಜನ್, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಟಿವಿಕೆ ಪಕ್ಷದ ಮೂಲಕ ಅಲ್ಲಿನ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಬಗ್ಗುಬಡಿದು ನೂರರ ಗಡಿ ದಾಟುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿದರು, ಈ ಹಿಂದೆ ಸಿನಿಮಾ ಹಿನ್ನೆಲೆಯ 1967ರಲ್ಲಿ ಅಣ್ಣಾದೊರೈ ಹಾಗೂ 1977ರಲ್ಲಿ ತಮಿಳು ನಟಸಾರ್ವಭೌಮ ಎಂಜಿಆರ್ ಸಹ 130 ಸ್ಥಾನಗಳನ್ನು ಪಡೆಯುವ ಮೂಲಕ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಏರಿದ್ದರು. ನಂತರ ಸಿನಿಮಾ ಹಿನ್ನೆಲೆಯ ಜಯಲಲಿತಾ ಸಹ ಅಧಿಕಾರ ಹಿಡಿದು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದರು, ಪ್ರಸ್ತುತ ವಿಜಯ್ ಅವರು ಎಂಜಿಆರ್ ಹಾದಿಯಲ್ಲಿಯೇ ಟಿವಿಕೆ ಪಕ್ಷದ ಮೂಲಕ ತಮಿಳುನಾಡಿನ ಅಧಿಕಾರದ ಗದ್ದುಗೆ ಏರಿರುವುದರಿಂದ ಸಂಭ್ರಮಾಚರಣೆ ನಡೆಸಲಾಗಿದೆ ಎಂದು ಹೇಳಿದರು.ಈ ವೇಳೆ ನಟ ವಿಜಯ್ ಅವರ ಹಲವಾರು ಅಭಿಮಾನಿಗಳು ಭಾಗಿಯಾಗಿದ್ದರು.