ಉಪ್ಪಾರ ಸಮಾಜ ಮೀಸಲಾತಿ ಪಟ್ಟಿಗೆ ಸೇರಿಸಿ

| Published : Dec 18 2023, 02:00 AM IST

ಸಾರಾಂಶ

ಕುಲಶಾಸ್ತ್ರ ಅಧ್ಯಯನದ ಮೂಲಕ ಉಪ್ಪಾರರಿಗೆ ಸೂಕ್ತ ಮೀಸಲಾತಿಗೆ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ವಿಳಂಬ ಮಾಡಿದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

* ಕೇಂದ್ರಕ್ಕೆ ಶಿಫಾರಸ್ಸು ವಿಳಂಬ ಮಾಡಿದ್ರೆ ಹೋರಾಟ ತೀವ್ರ: ಪುರುಷೋತ್ತನಾನಂದ ಶ್ರೀ । ಬಿಹಾರದಿಂದ ಬಂದ ಭಗೀರಥ ರಥಯಾತ್ರೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಲಶಾಸ್ತ್ರ ಅಧ್ಯಯನದ ಮೂಲಕ ಉಪ್ಪಾರರಿಗೆ ಸೂಕ್ತ ಮೀಸಲಾತಿಗೆ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ವಿಳಂಬ ಮಾಡಿದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ನಗರದ ಶ್ರೀ ಜಯದೇವ ವೃತ್ತದಲ್ಲಿ ಬಿಹಾರದಿಂದ ವಿವಿಧ ರಾಜ್ಯ ಸಂಚರಿಸಿ ಆಗಮಿಸಿದ್ದ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯ ಸ್ವಾಗತ ಹಾಗೂ ಸಮಾಜ ಬಾಂಧವರ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಉಪ್ಪಾರರ ಬೇಡಿಕೆ ಈಡೇರಿವವರೆಗೂ ಹೋರಾಟ ನಡೆಸಬೇಕಾಗುತ್ತದೆ. ಅನೇಕ ರಾಜ್ಯಗಳಲ್ಲಿ ಉಪ್ಪಾರ ಸಮುದಾಯ ಮೀಸಲಾತಿ ಪಟ್ಟಿಯಲ್ಲಿದ್ದು, ಕೆಲ ರಾಜ್ಯಗಳಲ್ಲಿ ಮೀಸಲಾತಿ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತ್ವರಿತವಾಗಿ ಕುಲಶಾಸ್ತ್ರ ಅಧ್ಯಯನ ಕೈಗೊಂಡು, ಶೋಷಿತ ಸಮುದಾಯವಾದ ಉಪ್ಪಾರ ಸಮಾಜ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ, ದೇಶದಲ್ಲಿ 10 ಕೋಟಿ ಮಂದಿ ಇರುವ ಸಮಾಜ ನಮ್ಮದು. ಹಿಂದುಳಿದ ವರ್ಗಗಳಲ್ಲಿ ರಾಜ್ಯದ 2ನೇ ಅತೀ ದೊಡ್ಡ ಸಮಾಜ ಎಂದು ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಸಿ:

ನವದೆಹಲಿ ಸಮಾವೇಶದ ಮೂಲಕ ಉಪ್ಪಾರರ ಶಕ್ತಿ ಪ್ರದರ್ಶನದ ಮೂಲಕ ಹಕ್ಕೊತ್ತಾಯಿಸಲಿದ್ದೇವೆ. ಅದಕ್ಕಾಗಿ ನಮಗೆ ಶಿಕ್ಷಣ, ಸಂಘಟನೆ, ಹೋರಾಟದ ಅಗತ್ಯವಿದೆ. ಇತಿಹಾಸ ಅಧ್ಯಯನ ಮಾಡಿದಾಗ ಮಾತ್ರ ಹೊಸ ಇತಿಹಾಸ ನಿರ್ಮಾಣ ಸಾಧ್ಯ.ಸಮುದಾಯದ ಭಗೀರಥ ಮಹರ್ಷಿಗಳ ಆಶ್ರಮವನ್ನು ಗಂಗಾ ನದಿ ತಟದಲ್ಲಿ ಸ್ಥಾಪಿಸಿ, ಭಗೀರಥದ ಕಂಚಿನ ಪುತ್ಥಳಿ ನಿರ್ಮಿಸಿ, ಅಧ್ಯಯನ ಪೀಠ ಸ್ಥಾಪಿಸಬೇಕು. ಕರ್ನಾಟಕದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮ ಮಾದರಿಯಲ್ಲಿ ಎಲ್ಲಾ ರಾಜ್ಯದಲ್ಲೂ ನಿಗಮ ಸ್ಥಾಪಿಸುವಂತೆ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು.

ಸಮಾಜದ ಮುಖಂಡರಾದ ತುರ್ಚಘಟ್ಟ ಎಸ್.ಬಸವರಾಜಪ್ಪ, ಎಚ್‌.ತಿಪ್ಪಣ್ಣ, ಮತ್ತಿ ಹನುಮಂತಪ್ಪ, ಯು.ಗುರುಮೂರ್ತಿ, ಶಿವ್‌ಜಿ ಮಾತೋ ಚೌಹಾಣ್‌, ಮಾಜಿ ಮೇಯರ್ ಡಿ.ಎಸ್‌.ಉಮಾಪ್ರಕಾಶ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ, ಮಾಜಿ ಉಪ ಮೇಯರ್‌ಗಳಾದ ಮಂಜಮ್ಮ, ಎಚ್.ಸಿ.ಜಯಣ್ಣ, ಗುರುರಾಜ, ಪಿ.ಎಸ್‌.ಬಸವರಾಜ, ಬಾತಿ ರೇವಣಸಿದ್ದಪ್ಪ, ಆರ್.ಪರಮೇಶ, ಗೊಲ್ಲರಹಳ್ಳಿ ಪ್ರಭು, ಎನ್.ಬಿ.ಲೋಕೇಶ, ಎ.ವೈ.ಶಿವಕುಮಾರ, ಎಂ.ಎನ್‌.ಮಂಜುನಾಥ, ಸ್ತ್ರೀ ರೋಗ ತಜ್ಞ ಡಾ.ನಾಗರಾಜ, ಡಾ.ಉಮೇಶ ಬಾಬು, ಅರ್ಜುನ್ ನಾಯಕವಾಡೆ, ಶ್ರೀನಿವಾಸ ಶೆಟ್ಟಿ, ಲೋಕೇಶ, ಎ.ಎಸ್.ಬಸವರಾಜ, ನಲ್ಕುಂದ ಹಾಲೇಶ, ಕವಿತಾ ರಾಜೇಶ, ಶ್ರೀನಿವಾಸ ಶೆಟ್ಟಿ, ಓಂಕಾರಪ್ಪ, ಗಿರೀಶ, ಅರ್ಜುನ, ಇತರರಿದ್ದರು. ತಾಲೂಕಿನ ದೊಡ್ಡಬಾತಿ ಗ್ರಾಮದ ಬಳಿ ಉಪ್ಪಾರ ಬಾಂಧ‍ರು ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಮಹಿಳೆಯರು ಪೂರ್ಣಕುಂಭ ಸಹಿತ ರಥಯಾತ್ರೆಗೆ ಬರ ಮಾಡಿಕೊಂಡರು.ಫೆಬ್ರವರಿಗೆ ನವದೆಹಲಿಯಲ್ಲಿ ಬೃಹತ್‌ ಸಮಾವೇಶ

ಮೀಸಲಾತಿ ಪಟ್ಟಿಗೆ ಉಪ್ಪಾರರ ಸೇರಿಸಲು ನವದೆಹಲಿಯ ಜಂತರ್ ಮಂಥರ್ ನಲ್ಲಿ ಫೆ.28 ಮತ್ತು 29ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಎಲ್ಲಾ ರಾಜ್ಯಗಳ ಜನ ಪ್ರತಿನಿಧಿಗಳು, ಗಣ್ಯರು ಭಾಗವಹಿಸುವರು. ಅದೇ ಸಮಾವೇಶದ 2ನೇ ದಿನ ನಿರ್ಣಯ ಕೈಗೊಂಡು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿಯ ಅಗತ್ಯವಿದೆ. ಇದನ್ನು ಕೇಂದ್ರ, ರಾಜ್ಯ ಸರ್ಕಾರಗಳು ಅರಿಯಬೇಕು ಎಂದು ಹೇಳಿದರು............