ಈದ್ ಮಿಲಾದ್ ಹಬ್ಬ ಪ್ರೀತಿ, ಸೌಹಾರ್ದ ಮತ್ತು ಶಾಂತಿಯ ಸಂದೇಶ ಸಾರುವುದಾಗಿದೆ. ಹಬ್ಬ ಆಚರಿಸುವಾಗ ಯಾವುದೇ ರೀತಿ ಕೋಮು ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತೆಕ್ಕಲಕೋಟೆ ಪೊಲೀಸ್ ಠಾಣೆಯ ಸಿಪಿಐ ಚಂದನ ಗೋಪಾಲ್ ಹೇಳಿದರು.
ತೆಕ್ಕಲಕೋಟೆ: ಈದ್ ಮಿಲಾದ್ ಹಬ್ಬ ಪ್ರೀತಿ, ಸೌಹಾರ್ದ ಮತ್ತು ಶಾಂತಿಯ ಸಂದೇಶ ಸಾರುವುದಾಗಿದೆ. ಹಬ್ಬ ಆಚರಿಸುವಾಗ ಯಾವುದೇ ರೀತಿ ಕೋಮು ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಬೇಕು. ಮೆರವಣಿಗೆ ಮತ್ತು ಇತರ ಕಾರ್ಯಕ್ರಮ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ನಡೆಸಬೇಕು. ಧ್ವನಿವರ್ಧಕ ಬಳಕೆ, ಸಮಯದ ಪಾಲನೆ ಸೇರಿದಂತೆ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತೆಕ್ಕಲಕೋಟೆ ಪೊಲೀಸ್ ಠಾಣೆಯ ಸಿಪಿಐ ಚಂದನ ಗೋಪಾಲ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.ತಾಲೂಕಿನಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಎಲ್ಲ ಸಮುದಾಯದವರು ಪರಸ್ಪರ ಸಹಕಾರದಿಂದ ಹಬ್ಬ ಆಚರಿಸಬೇಕು ಎಂದರು.ಹಬ್ಬದ ಸಮಯದಲ್ಲಿ ಕಟ್ಟುವ ಬ್ಯಾನರ್ಗಳು ಯಾವುದೇ ವಿವಾದಾತ್ಮಕ ಸಂದೇಶ ಮತ್ತು ಹೇಳಿಕೆ ಇರದಂತೆ ಎಚ್ಚರಿಕೆ ವಹಿಸಬೇಕು. ಯುವಕರು ಜಾಲತಾಣಗಳಲ್ಲಿ ಯಾವುದೇ ವಿಚಾರ ಹಂಚುವ ಮುನ್ನ ಎಚ್ಚರಿಕೆ ವಹಿಸಬೇಕು. ಮೆರವಣಿಗೆ ಸೇರಿದಂತೆ ಸಾಮೂಹಿಕ ಪ್ರಾರ್ಥನೆಗೆ ಇಲಾಖೆಯ ಅನುಮತಿ ಕಡ್ಡಾಯ. ಅಲ್ಲದೆ ಸಂಚಾರಿ ನಿಯಮ ಪಾಲಿಸುವಂತೆ ಸೂಚಿಸಿದರು.
ಹಬ್ಬಗಳು ಸಮಾಜದಲ್ಲಿ ಸೌಹಾರ್ದ ಮತ್ತು ಭಾತೃತ್ವ ಹೊಂದಿರುವ ಸಂಕೇತ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಂಚಾರಿಗಳಿಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಧ್ವನಿ ವರ್ಧಕಗಳ ಬಳಕೆಯಲ್ಲಿ ನಿಯಮ ಪಾಲಿಸಬೇಕು. ಯಾವುದೇ ಕೋಮು ಪ್ರಚಾರದ ಗೀತೆಗಳನ್ನು ಹಾಡುವುದು ಮತ್ತು ವಾದಕಗಳನ್ನು ಬಳಸುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆಸುವ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು. ಅನುಮಾನಾಸ್ಪದ ಘಟನೆಗಳು ಕಂಡು ಬಂದಲ್ಲಿ ತಕ್ಷಣ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಪಿಎಸ್ಐ ಸದ್ದಾಂ ಹುಸೇನ್ ಎಚ್., ಮುಖಂಡರಾದ ಚಾಂದ್ ಭಾಷ, ಪೀರ್ಸಾಬ್, ನಬಿ ರಸೂಲ್, ಮುದುಕಣ್ಣ, ವಲಿಬಾಷ, ಬಿ. ಶಾಶಾವಲಿ ಸೇರಿದಂತೆ ವಿವಿಧ ಯುವಕ-ಸಂಘಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.