ಸಾರಾಂಶ
ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ ಹೊಸಪೇಟೆಪ್ಲಾಸ್ಟಿಕ್ ಮುಕ್ತವಾಗಿ ಬದುಕುವ ವಿಧಾನವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ವಿಶ್ವ ಪರಿಸರ ದಿನ ಅರ್ಥಪೂರ್ಣವಾಗಿ ಆಚರಿಸಿದಂತಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಹೇಳಿದರು. ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ನಗರದ ವಿಜಯನಗರ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ವರ್ಷ ಸರ್ಕಾರ ಪರಿಸರ ದಿನಾಚರಣೆಗೆ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದು’ ಎಂಬ ಘೋಷವಾಕ್ಯವನ್ನು ಹೊರಡಿಸಿದೆ. ಪ್ಲಾಸ್ಟಿಕ್ ಬಳಕೆಯ ಗಂಭೀರತೆಯನ್ನು ಅರಿಯಬೇಕಿದೆ. ಪರಿಸರ ದಿನವೆಂದರೇ ಕೇವಲ ಗಿಡ ನೆಡುವುದಷ್ಟೇ ಅಲ್ಲ. ನಮ್ಮ ಸುತ್ತಲಿನ ಪರಿಸರವನ್ನು ಮಾಲಿನ್ಯ ಮುಕ್ತಗೊಳಿಸುವುದು. ಮಾಲಿನ್ಯಕ್ಕೆ ಯಾವುದೇ ಪ್ರಾಣಿಗಳು ಕಾರಣವಲ್ಲ. ಮನುಷ್ಯನೇ ಮೂಲ ಕಾರಣವಾಗಿದ್ದಾನೆ. ಜಲ, ಶಬ್ದ, ವಾಯು, ವಾತವರಣ ಸೇರಿ ಯಥೇಚ್ಚವಾಗಿ ಮಾಲಿನ್ಯ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಮಾರಕವಾಗಿದೆ. ಮಾಲಿನ್ಯ ನಿಯಂತ್ರಣ ಕೇವಲ ಸರ್ಕಾರದ ಹೊಣೆಗಾರಿಕೆ ಅಲ್ಲ. ಸರ್ಕಾರದೊಂದಿಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಲು ಕೈಜೋಡಿಸಬೇಕಿದೆ. ವಿದ್ಯಾರ್ಥಿ ದಿಸೆಯಲ್ಲಿ ಪರಿಸರ ಪ್ರೇಮಿಯಾಗಲು ಅಲೋಚಿಸಬೇಕು. ನಮ್ಮಂತೆಯೇ ವಿವಿಧ ಜೀವಿಗಳು ಪರಿಸರದಲ್ಲಿ ಬದುಕುತ್ತಿವೆ. ಬದುಕುವ ಹಕ್ಕು ಎಲ್ಲರಿಗೂ ಇದೆ. ಶುದ್ಧ ಗಾಳಿ ಸೇವನೆಯಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಲ್ಲಿ ಬೈಕ್ ಬಳಕೆಗಿಂತ ಬೈಸಿಕಲ್ ಬಳಕೆ ಹೆಚ್ಚಾಗಲಿ. ತರಕಾರಿ, ಹಾಲು, ದಿನಸಿ ಸಾಮಗ್ರಿಗಳ ಖರೀದಿಗಿ ಪ್ಲಾಸ್ಟಿಕ್ ಬಳಕೆ ಬಿಟ್ಟು ಬಿಡಿ. ಮನೆಗಳಲ್ಲಿ ಹಸಿಕಸ, ಒಣ ಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡುವಂತಾಗಲಿ. ನಿಮ್ಮ ಸಣ್ಣ ಪುಟ್ಟ ಕೆಲಸಗಳು ಪರಿಸರಕ್ಕೆ ಹಿತವಾಗಲಿದೆ ಎಲ್ಲರೂ ಸಂಕಲ್ಪ ಮಾಡಿ ಪ್ಲಾಸ್ಟಿಕ್ ಬಳಕೆ ತ್ಯಜಿಸೋಣ, ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸೋಣ ಎಂದರು.
ಪರಿಸರ ಮತ್ತು ವನ್ಯಜೀವಿ ತಜ್ಞ ಡಾ. ಅಬ್ದುಲ್ ಸಮದ್ ಕೊಟ್ಟೂರು, ಪರಿಸರ ಅಧಿಕಾರಿಗಳಾದ ಬಿ.ಎಸ್. ಮುರಳಿಧರ್, ಎಚ್.ಮೀನಾಕ್ಷಿ, ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಪ್ರಭುಗೌಡ, ಪರಿಸರವಾದಿ ರವಿಕುಮಾರ್ ಇತರರಿದ್ದರು.