ಹಂಚಿಕೊಂಡು ತಿನ್ನುವ ಮನೋಭಾವ ಅಳವಡಿಸಿಕೊಳ್ಳಿ

| Published : Jun 08 2025, 02:01 AM IST

ಸಾರಾಂಶ

ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ನಿಮಿತ್ತ ಶ್ರದ್ಧಾಭಕ್ತಿಯಿಂದ ಮುಸ್ಲಿಂ ಬಾಂಧವರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬಕ್ರೀದ್‌: ವಿಜಯನಗರ ಜಿಲ್ಲೆಯಾದ್ಯಂತ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ನಿಮಿತ್ತ ಶ್ರದ್ಧಾಭಕ್ತಿಯಿಂದ ಮುಸ್ಲಿಂ ಬಾಂಧವರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಗರದ ಆರ್.ಟಿ.ಒ ಈದ್ಗಾ ಮೈದಾನ, ಚಿತ್ತವಾಡ್ಗಿ ಈದ್ಗಾ ಮೈದಾನ, ಟಿಬಿ ಡ್ಯಾಂ ಈದ್ಗಾ ಮೈದಾನ, ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನ, ಬಳ್ಳಾರಿ ರಸ್ತೆಯಲ್ಲಿರುವ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ, ನಾಗೇನಹಳ್ಳಿ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಹುಡಾ ಅಧ್ಯಕ್ಷ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಬಕ್ರೀದ್ ಹಬ್ಬವು ರಾಜ್ಯ, ಜಿಲ್ಲೆ ಸೇರಿದಂತೆ ದೇಶಾದ್ಯಂತ ಉತ್ತಮ ಮಳೆ, ಬೆಳೆಯಾಗಿ ಪ್ರತಿಯೊಬ್ಬರಿಗೂ ಸುಃಖ ಶಾಂತಿ, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ, ಪ್ರೇಮ, ವಾತ್ಸಲ್ಯದಿಂದ ಸಮೃದ್ಧಿಗೊಂಡು ಉತ್ತಮ ಆರ್ಥಿಕತೆ, ಆರೋಗ್ಯ, ಆಯುಷ್ಯ, ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು.ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರ್‌ ಅವರ ಆದೇಶದ ಪ್ರಕಾರ ಕುರ್ಬಾನಿ ಎಂದರೆ ತ್ಯಾಗ, ಅಂದರೆ ನಮ್ಮಲ್ಲಿರುವ (ಅರಿಷಡ್ ವರ್ಗಗಳಾದ) ಕೆಟ್ಟ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವುಗಳೊಂದಿಗೆ ಮುಂತಾದ ದುರ್ಗುಣಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಪರಸ್ಪರರೊಂದಿಗೆ ಹಂಚಿಕೊಂಡು ತಿನ್ನುವ ಮನೋಭಾವ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯನ್ನು ಮೌಲಾನಾ ಮೊಹಮ್ಮದ್ ಅಬುಬಕರ್ ಅಶ್ರಫಿ ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು.

ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಎಂ. ಫಿರೋಜ್ ಖಾನ್, ಕಾರ್ಯದರ್ಶಿ ಎಂ.ಡಿ. ಅಬೂಬಕ್ಕರ್, ಪದಾಧಿಕಾರಿಗಳಾದ ಜಿ.ಅನ್ಸರ್ ಬಾಷಾ, ಡಾ. ಎಂ.ಡಿ. ದುರ್ವೇಶ್ ಮೈನುದ್ದಿನ್, ಕೋತ್ವಾಲ್ ಮೊಹಮ್ಮದ್ ಮೋಸಿನ್, ಸದ್ದಾಮ್ ಮತ್ತು ಎಲ್. ಗುಲಾಮ್ ರಸೂಲ್, ಅಬ್ದುಲ್ ಖಾದರ್ ರಫಾಯಿ, ಖದೀರ್ ಮುಖಂಡರಾದ ಜಫ್ರುಲ್ಲಾ ಖಾನ್‌ಸಾಬ್, ರಜಾಕ್, ಕಟಗಿ ಸಾದೀಕ್, ಯೂಸುಫ್, ಮನ್ಸೂರ್ ಮತ್ತಿತರರು ಭಾಗವಹಿಸಿದ್ದರು.