ಶಿವಾಜಿ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ

| Published : Feb 20 2025, 12:46 AM IST

ಸಾರಾಂಶ

ಶಿಕಾರಿಪುರ: ಶಿವಾಜಿ ಮಹಾರಾಜರ ದೇಶ ಭಕ್ತಿಯ ತತ್ವ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿಕಾರಿಪುರ: ಶಿವಾಜಿ ಮಹಾರಾಜರ ದೇಶ ಭಕ್ತಿಯ ತತ್ವ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬುಧವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಮರಾಠ ಸಮಾಜ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದ ಹಿಂದೂ ಧರ್ಮ ಪಾಲನೆಗೆ ಹಲವು ತೊಂದರೆಗಳಿದ್ದು, ಸನಾತನ ಹಿಂದೂ ಧರ್ಮದ ವಿರುದ್ಧ ನಿರಂತರ ಸಾವಿರಾರು ವರ್ಷ ದಾಳಿ ನಡೆದರೂ ಛತ್ರಪತಿ ಶಿವಾಜಿ ಮಹಾರಾಜರ ರೀತಿಯ ಅಪ್ರತಿಮ ಹೋರಾಟಗಾರರಿಂದ ಹಿಂದೂ ಧರ್ಮದ ರಕ್ಷಣೆಯಾಗಿದೆ. ಹಿಂದೂ ಧರ್ಮದ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಬಹು ದೊಡ್ಡ ಕೊಡುಗೆ ನೀಡಿದ್ದು, ಸನಾತನ ಧರ್ಮದ ಗೌರವ ಹೆಚ್ಚಳಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಯುವ ಸಮುದಾಯ ದೇಶದ ಇತಿಹಾಸವನ್ನು ತಿಳಿಯಬೇಕು ಹಾಗೂ ಇತಿಹಾಸವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.

ಹಿಂದೂ ಧರ್ಮಕ್ಕೆ ಸವಾಲು ಎದುರಾದಾಗ ಛತ್ರಪತಿ ಶಿವಾಜಿ ಮಹಾರಾಜರ ರೀತಿ ಹೋರಾಟ ಮಾಡಲು ನಾವೆಲ್ಲಾ ಸಿದ್ಧರಾಗಬೇಕು. ತಾಯಿ ಜೀಜಾಬಾಯಿ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಹಿಂದೂ ಸಾಮ್ರಾಜ್ಯವನ್ನೇ ಉಳಿಸಿ ಬೆಳೆಸುವ ಮಟ್ಟಕ್ಕೆ ಶಿವಾಜಿ ಮಹಾರಾಜರು ಬೆಳೆದಿದ್ದರು. ಮೊಘಲರ ವಿರುದ್ಧ ಹೋರಾಟ ಮಾಡಿ ದೇಶ ರಕ್ಷಣೆ ಮಾಡಿದರು. ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಶಿವಾಜಿ ಮಹಾರಾಜರು ಸನಾತನ ಧರ್ಮದ ಗೌರವ ಹೆಚ್ಚಳವಾಗುವಂತೆ ಮಾಡಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮರಾಠ ಸಮಾಜ ಅಧ್ಯಕ್ಷ ಗುರುರಾಜ್ ರಾವ್ ಜಗತಾಪ್, ಗ್ರೇಡ್- 2 ತಹಸೀಲ್ದಾರ್ ರವಿಕುಮಾರ್, ಶಿರಸ್ತೇದಾರ್ ವಿನಯ್ ಎಂ.ಆರಾಧ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಪುರಸಭೆ ವ್ಯವಸ್ಥಾಪಕ ರಾಜ್ ಕುಮಾರ್, ಮುಖಂಡ ವಸಂತಗೌಡ, ಬಿ.ಸಿ.ವೇಣುಗೋಪಾಲ್, ಬಂಗಾರಿ ನಾಯ್ಕ, ಸಂಕ್ಲಾಪುರ ಹನುಮಂತಪ್ಪ, ಗಣೇಶ್ ಕರಾಡೆ ದಾನೋಜಿರಾವ್, ಲಕ್ಷ್ಮಣರಾವ್, ಚಂದ್ರೋಜಿ ರಾವ್, ರವೀಂದ್ರ, ನಾರಾಯಣರಾವ್ ಶಿಂಧೆ, ದಿವಾಕರ, ಪ್ರಶಾಂತ್ ಸಾಳಂಕೆ, ವಿಕಾಸ್, ಅಶೋಕ್, ತೋಪೋಜಿ ರಾವ್, ಹನುಮಂತಪ್ಪ,ರೇವಣಪ್ಪ, ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.