ಶರಣರ, ಸಂತರ ವಿಚಾರಧಾರೆ ಅಳವಡಿಸಿಕೊಳ್ಳಿ: ಗವಿಮಠದ ಶ್ರೀ

| Published : Feb 19 2024, 01:31 AM IST

ಶರಣರ, ಸಂತರ ವಿಚಾರಧಾರೆ ಅಳವಡಿಸಿಕೊಳ್ಳಿ: ಗವಿಮಠದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ತನ್ನ ಜೀವನದುದ್ದಕ್ಕೂ ಶರಣರ, ಸಂತರ ವಿಚಾರಧಾರೆ ಅಳವಡಿಸಿಕೊಂಡಾಗ ಜೀವನ ಸಾರ್ಥಕ ಜೀವನ ಸಾಧ್ಯ.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಮನುಷ್ಯ ತನ್ನ ಜೀವನದುದ್ದಕ್ಕೂ ಶರಣರ, ಸಂತರ ವಿಚಾರಧಾರೆ ಅಳವಡಿಸಿಕೊಂಡಾಗ ಜೀವನ ಸಾರ್ಥಕ ಜೀವನ ಸಾಧ್ಯ. ಈ ನಿಟ್ಟಿನಲ್ಲಿ ದೇಹಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸಿಕೊಂಡು ಪರೋಪಕಾರಿ ಜೀವನ ನಡೆಸಬೇಕು ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಬಸವನಾಳ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಬಸವಾದಿ ಶರಣರು, ಸಾಧು- ಸಂತರು ನಡೆದಾಡಿದ ಕೊಂಪೆಯಂತಿರುವ ಒಣಬೇಸಾಯದ ನಾಡಾದಂತಹ ಬಸವನಾಳದಲ್ಲಿ ಭವ್ಯವಾದ ದೇವಾಲಯ ನಿರ್ಮಿಸುವ ಮೂಲಕ ಪುಣ್ಯಭೂಮಿಯನ್ನಾಗಿ ಪರಿವರ್ತಿಸುವಲ್ಲಿ ಈ ಗ್ರಾಮದ ಜನರ ಶ್ರಮ ಮಹತ್ವದ್ದಾಗಿದೆ ಎಂದರು.

ಶರಣರು, ಸಾಧು-ಸಂತರು ತಮ್ಮಲ್ಲಿರುವ ಉತ್ತಮ ವಿಚಾರಧಾರೆಗಳ ಮೂಲಕ ಕಲ್ಯಾಣವನ್ನು ಕಟ್ಟಿ ಮಹಾನುಭಾವರೆನಿಸಿದ್ದಾರೆ. ಅದೇ ರೀತಿ ಭಗವಂತ ಕೊಟ್ಟಂತಹ ಈ ದೇಹ, ಮಾತು, ಮನಸ್ಸನ್ನು ಸ್ವಚ್ಛಂದವಾಗಿ ಇರಿಸಿಕೊಂಡು ಭೂತಾಯಿಯ ಮಡಿಲಲ್ಲಿ ದುಡಿದು ಪರೋಪಕಾರಿಯಾಗಿ ಜೀವನದ ಪ್ರತಿಯೊಂದು ಕ್ಷಣಗಳನ್ನೂ ಸಂತೋಷದಿಂದ ಕಳೆದರೆ ಉತ್ತಮವಾದಂತಹ ಸಮಾಜ ನಿರ್ಮಾಣದ ಜೊತೆಗೆ ಶರಣರ ಕಲ್ಯಾಣದಲ್ಲಿ ಸ್ವಚ್ಛಂದದ ಬದುಕನ್ನು ನಡೆಸಲು ಸಾಧ್ಯವಿದೆ. ಸಣ್ಣ ಪುಟ್ಟ ವೈಮನಸ್ಸು ಬಿಟ್ಟು ಹೊಂದಾಣಿಕೆಯಿಂದ ಬದುಕುವುದನ್ನ ಕಲಿಯಬೇಕು. ಇನ್ನೊಬ್ಬರ ಮನಸ್ಸಲ್ಲಿ ಖುಷಿ ತರಿಸುವವನೇ ಅತೀ ಯಶಸ್ವಿ ಮನುಷ್ಯನಾಗುತ್ತಾನೆ ಎಂದರು.

ಸಾನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ಪೂರ್ವಜನ್ಮದ ಸಂಸ್ಕಾರದ ಫಲವಿದ್ದಾಗ ಜಾತ್ರೆಗಳು ಯಶಸ್ವಿಯಾಗಲು ಸಾಧ್ಯ. ಸಂಸಾರ, ಜೀವನ ಜಂಜಾಟದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು, ಶರಣರ ಮಾರ್ಗದರ್ಶನದ ಮಾತುಗಳು ನಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ ಎಂದರು.

ಧರ್ಮಸಭೆಯಲ್ಲಿ ವೀರಬಸವ ದೇವರು, ಗ್ರಾಮದೇವಿ ದೇವಸ್ಥಾನ ಸಮಿತಿ ಸದಸ್ಯರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಮನಸ್ಥಿತಿ ಬದಲಾಯಿಸಿಕೊಳ್ಳಿ:

ಬಸವನಾಳದ ಕೊಂಪೆಯಲ್ಲಿ ಹಂಪೆಯಂತಹ ದೇವಸ್ಥಾನ ನಿರ್ಮಾಣ ಮಾಡಿದ್ದೀರಿ. ದೇವರು ನಿಮಗಾಗಿ ಕೊಟ್ಟ ಮನೆಯಲ್ಲಿಯೇ ದೇವರ ಕೊಠಡಿ ಕಟ್ಟಿಸಿದ್ದೇನೆ ಎನ್ನುವುದು ಮನುಷ್ಯನ ವಿಪರ್ಯಾಸ. ದೇವರಿಗೆ ತುಪ್ಪದ ದೀಪ ಹಚ್ಚಿ ನೈವೇದ್ಯ ಮಾಡುತ್ತೀರಿ. ಆದರೆ ಸೂರ್ಯ, ಚಂದ್ರರು ಪ್ರತಿದಿನವೂ ದೀಪದಂತೆ ಬೆಳಗುತ್ತಿದ್ದಾರೆ. ನೀವು ಅವರಿಗೆ ಏನು ನೈವೇದ್ಯ ಮಾಡಲು ಸಾಧ್ಯ?. ನಮ್ಮ ದೇಹವೇ ಗುಡಿ ಕಟ್ಟಿದ ಹಾಗೆ, ತ್ರಿಕರ್ಣಗಳು ಸ್ವಚ್ಛವಾಗಿರಬೇಕಾದರೆ ಮಾತು ಸ್ವಚ್ಛವಾಗಿರಬೇಕು, ಕುಡಿದು ಬದುಕುವುದನ್ನ ಬಿಟ್ಟು ದುಡಿದು ಬದುಕಬೇಕು, ದುಡಿದೇ ಬದುಕಬೇಕು ಎಂಬುದು ದೇವನ ಸೃಷ್ಟಿಯಾಗಿದೆ. ಅರಳಿದ ಹೂಗಿಂತ ಅರಳಿದ ಮನಸ್ಸು ದೇವರಿಗೆ ಪ್ರಿಯವಾಗುತ್ತದೆ. ಮನಸ್ಸಿನ ಶಾಂತಿಗಾಗಿ ಕಟ್ಟಿದ ಮನೆಯನ್ನು ಒಡೆಯುವುದು ಬಿಟ್ಟು ತಮ್ಮ ತಮ್ಮ ಮನಸ್ಥಿತಿ ಮೊದಲು ಬದಲಾಯಿಸಿಕೊಳ್ಳಿ ಎಂದು

ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಿಳಿಸಿದರು.