ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಸಂತರ ಜ್ಞಾನ, ಸಮಾಜದ ಮೇಲಿದ್ದ ಕಳಕಳಿ ಮೆಲುಕು ಹಾಕಿ, ಅವರ ತತ್ವಾದರ್ಶ ನೆನಪಿಸಿಕೊಳ್ಳುವಗೊಸ್ಕರ ಮಹನೀಯರ ಜಯಂತಿ ಆಚರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಬಾಗಲಕೋಟೆ ನಿವೃತ್ತ ಪ್ರಾಚಾರ್ಯ ಎಸ್.ಎಸ್. ತೆಕ್ಕೆನ್ನವರ ಹೇಳಿದರು.ನಗರದ ರನ್ನ ಭವನದಲ್ಲಿ ತಾಪಂ, ತಾಲೂಕು ಆಡಳಿತ, ನಗರಸಭೆ, ಬಿಸಿಎಂ ಇಲಾಖೆ ಆಶ್ರಯದಲ್ಲಿ ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ಎಲ್ಲ ಮಹನೀಯರು ಎಲ್ಲ ಸಮುದಾಯದ ಏಳ್ಗೆಗಾಗಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ಕನಕದಾಸರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುರುಬ ಸಮುದಾಯ ಜತೆ ಎಲ್ಲ ಸಮುದಾಯದವರೂ ಕೂಡಿ ಜಯಂತಿ ಆಚರಣೆ ಮಾಡಬೇಕಾಗಿದೆ ಎಂದರು. ನಿತ್ಯಾನಂದ ಶ್ರಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜಾತೀಯತೆ, ಮೇಲು-ಕೀಳು ಅನೇಕ ಭೇದ-ಭಾವ ಹೋಗಲಾಡಿಸುವ ಹಾಗೂ ದಾಸ ಸಾಹಿತ್ಯದ ಮೂಲಕ ಕನ್ನಡ ನಾಡಿಗೆ ಸಾರಸತ್ವ ನೀಡಿದ್ದು ಈ ಮಹಾನ ಸಂತ ಕನಕದಾಸರು, ಇಂಥ ವಿಚಾರ ತಿಳಿಯಲು ಈ ಆಚರಣೆಗಳ ಸದುಪಯೋಗ ಆಗಬೇಕು ಎಂದರು.
ಕಾರ್ಯಕ್ರಮದ ಮುಂಚೆ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿ ನಿರ್ಗಮಿಸಿದರು. ನಗರದ ಪ್ರಮುಖ ವೃತ್ತಗಳ ಮೂಲಕ ಕುಂಭಮೇಳ, ವಿವಿಧ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆಯು ವೇದಿಕೆಗೆ ತಲುಪಿತು. ಚಿನ್ಮಯಾನಂದ ಶ್ರೀಗಳು, ಜ್ಯೋತಿ ಲಕ್ಕಪ್ಪ ಮಹಾರಾಜರು, ಸದಾನಂದ ಶ್ರೀಗಳು, ಜಗದೀಶ ಆನಂದ ಶ್ರೀಗಳು, ಯಮುನಾನಂದ ಗುರೂಜಿ ಸಾನ್ನಿಧ್ಯ ವಹಿಸಿದ್ದರು, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ.ಬಾಗವಾನ, ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.ಬಿಸಿಎಂ ಅಧಿಕಾರಿ ಎಂ.ಎನ್. ತಹಸೀಲ್ದಾರ್, ಶಿರಸ್ತೇದಾರ ರಂಗನಗೌಡ ನಾಯಕ, ಸಿಪಿಐ ಮಹಾದೇವ ಶಿರಹಟ್ಟಿ, ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ಹೊಸಮನಿ, ಆರ್.ಎಸ್.ನಿಡೋಣಿ, ಸಮಾಜದ ಮುಖಂಡರಾದ ಕಾಶಿನಾಥ ಹುಡೇದ, ದುಂಡಪ್ಪ ಇಟಕ್ಕನವರ, ಸದಾಶಿವ ಇಟಕ್ಕನವರ, ಭೀಮಶಿ ಸರಕಾರಕುರಿ, ವೀರೇಶ ಹುದ್ದಾರ, ಸದಾಶಿವ ಬನಾಜ, ಬಸವರಾಜ ಬೂದಿ, ಗಂಗಾಧರ ಗಾಣಗೇರ, ಬಸವರಾಜ ಬಳ್ಳಾರಿ ಇತರರಿದ್ದರು.