ಗೇಟ್‌ ಕಟ್ಕೊಂತ ಕುಂತು ಆಸ್ಪತ್ರೆ ಹಾಳುಗೆಡವಿದ್ರು

| Published : Mar 15 2024, 01:19 AM IST

ಗೇಟ್‌ ಕಟ್ಕೊಂತ ಕುಂತು ಆಸ್ಪತ್ರೆ ಹಾಳುಗೆಡವಿದ್ರು
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ನಾಡಿನ ಪ್ರತಿಷ್ಠಿತ ಹೈಕಶಿ ಸಂಸ್ಥೆಯಡಿಯಲ್ಲಿರುವ, ಆ ಸಂಸ್ಥೆಯ ಎರಡು ಕಣ್ಣುಗಳೆಂದೇ ಹೆಸರಾಗಿದ್ದ ಆಸ್ಪತ್ರೆಗಳಿಂದು ಅಧೋಗತಿ ತಲುಪಿವೆ. 30ಕ್ಕೂ ಹೆಚ್ಚು ಬೆಡ್‌ಗಳಿರುವ ಇಲ್ಲಿನ ಐಸಿಯೂನಲ್ಲಿ ರೋಗಿಗಳಿಲ್ಲ, ಅಷ್ಟೇ ಯಾಕೆ ಇಲ್ಲಿರುವ ಯಾವುದೇ ಸೂಪರ್‌ ಸ್ಪೇಷಾಲಿಟಿ ವಿಭಾಗದಲ್ಲಿ ಇಣುಕಿದರೂ ನಿರೀಕ್ಷಿತ ರೋಗಿಗಳಿಲ್ಲ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿರುವ ಬಸವೇಶ್ವರ ಹಾಗೂ ಸಂಗಮೇಶ್ವರ ಆಸ್ಪತ್ರೆಗಳಲ್ಲಿ ಒಂದೂವರೆ ದಶಕದ ಹಿಂದೆ ಪ್ರವೇಶ ಪಡೆದು ಚಿಕಿತ್ಸೆ ಹೊಂದಲು ರೋಗಿಗಳಿಗೆ ಬೆಡ್‌ಗಳೇ ಸಿಗ್ತಿರಲಿಲ್ಲ, ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿದ್ವು, ಅದಕ್ಕಾಗಿಯೇ ಅಷ್ಟೊಂದು ರಶ್‌ ಇರ್ತಿದ್ದವು, ಈ ಆಸ್ಪತ್ರೆಯಲ್ಲಿ ಬೆಡ್‌ಗಾಗಿ ಶಿಫಾರಸು ಬೇಕಿತ್ತು, ಗಣ್ಯರ ಮಾತಿಲ್ದೆ ಬೆಡ್‌ ಸಿಗ್ತಿರಲಿಲ್ಲ ಅಷ್ಟೊಂದು ರೋಗಿಗಳಿಂದ ತುಂಬಿರುತ್ತಿತ್ತು, ಆದರೀಗ ಆವೋ ಜಾವೋ ಅಂತಾರಲ್ಲ ಹಂಗ ಆಗಿದೆ, ಜನರಿಗೆ ವೈದ್ಯಕೀಯ ಸೇವೆ ನೀಡುವಲ್ಲಿ ಅಗ್ರಗಣ್ಯವಾಗಿದ್ದ ಆಸ್ಪತ್ರೆಗಳೆರಡೂ ಇಂದು ನಿರೀಕ್ಷೆಯಂತೆ ರೋಗಿಗಳಿಲ್ಲದೆ ಬಣಗುಡುತ್ತಿವೆ.

ಕಲ್ಯಾಣ ನಾಡಿನ ಪ್ರತಿಷ್ಠಿತ ಹೈಕಶಿ ಸಂಸ್ಥೆಯಡಿಯಲ್ಲಿರುವ, ಆ ಸಂಸ್ಥೆಯ ಎರಡು ಕಣ್ಣುಗಳೆಂದೇ ಹೆಸರಾಗಿದ್ದ ಆಸ್ಪತ್ರೆಗಳಿಂದು ಅಧೋಗತಿ ತಲುಪಿವೆ. 30ಕ್ಕೂ ಹೆಚ್ಚು ಬೆಡ್‌ಗಳಿರುವ ಇಲ್ಲಿನ ಐಸಿಯೂನಲ್ಲಿ ರೋಗಿಗಳಿಲ್ಲ, ಅಷ್ಟೇ ಯಾಕೆ ಇಲ್ಲಿರುವ ಯಾವುದೇ ಸೂಪರ್‌ ಸ್ಪೇಷಾಲಿಟಿ ವಿಭಾಗದಲ್ಲಿ ಇಣುಕಿದರೂ ನಿರೀಕ್ಷಿತ ರೋಗಿಗಳಿಲ್ಲ, ಇಲ್ಲಿನ ಪ್ರಸೂತಿ ವಿಭಾಗವಂತೂ ಮೊದಲು ಭಾರೀ ಹೆಸರುವಾಸಿಯಾಗಿತ್ತು, ಆದರಿಂದು ಸೂಕ್ತ ಸವಲತ್ತಿಲ್ಲದೆ ಇಲ್ಲಿಯೂ ರೋಗಿಗಳ ಬರ ಬಂದಿದೆ.

ನರರೋಗ ವಿಭಾಗದಲ್ಲಂತೂ ಹಿಂದಿದ್ದ ಡಾ. ಶಶಾಂಕ್‌ ರಾಮದುರ್ಗರಂತಹ ಸರ್ಜನ್‌ಗಳು ನರ ಸಮಸ್ಯೆಗಳಿಗೆ ಪರಿಹಾರ ನೀಡುವಾಗ ಇದನ್ನೆಲ್ಲ ಬಸವಸೇಶ್ವರದಲ್ಲಿ ಮಾಡಿದ್ರಾ ಎಂದು ಅಚ್ಚರಿ ಪಡುವಂತೆ ಪವಾಡಗಳನ್ನೇ ಮಾಡಿದ್ದರು.

ಆದರಿಂದು ಇಲ್ಲಿಯೂ ಅವ್ಯವಸ್ಥೆ. ಮೂಳೆ ತಜ್ಞ, ಜನಪರ ವೈದ್ಯ ಡಾ. ಎಸ್‌. ಎಸ್‌. ಗುಬ್ಬಿ, ಡಾ. ವಿಶ್ವನಾಥ ರೆಡ್ಡಿಯವರಂತಹ ಸರ್ಜನ್‌ಗಳಿಂದೇ ಸಲಹೆ, ಚಿಕಿತ್ಸೆ ಪಡೆಯಲು ಇಲ್ಲಿದ್ದಾಗ ರೋಗಿಗಳು ಸರತಿಯಲ್ಲಿರುತ್ತಿದ್ದರು. ಕ್ಯಾಜುಲಿಟಿ ತುಂಬಿ ತುಳುಕುತ್ತಿತ್ತು. ಹೊರ ರೋಗಿಗಳ ವಿಭಾಗದಲ್ಲಿ ಕಾಲಿಡಲು ಜಾಗವಿರುತ್ತಿರಲಿಲ್ಲ. ಆದರೀಗ ಇದೆಲ್ಲ ಗತ ವೈಭವ, ವಾತ್ಸವವೆಂದರೆ ಎಲ್ಲಿ ನೋಡಿದರಲ್ಲಿ ಅವ್ಯವಸ್ಥೆ, ಆರೈಕೆ ಇಲ್ಲ, ಈ ಸಂಸ್ಥೆಯ ಆಡಳಿತದಲ್ಲಿರುವವರೇ ಹೇಳುವಂತೆ ಆಸ್ಪತ್ರೆ ಈಗ ಚಿಂತಾಜನಕ ಸ್ಥಿತಿ ತಲುಪಿದೆ.

ಗೇಟ್‌ ಕಟ್ಕೊಂತ ಕುಂತ್ರು- ಆಸ್ಪತ್ರೆ ಹಾಳುಗೆಡವಿದ್ರು: ಹೈಕಶಿ ಸಂಸ್ಥೆಗೆ ಅಧ್ಯಕ್ಷರಾಗಿ ಎರಡು ದಶಕಗಳಲ್ಲಿ ಬಂದವರಲ್ಲಿ ಬಹುತೇಕರಿಗೆ ಇಂತಹ ಸಂಸ್ಥೆಯ ಅಭಿವೃದ್ಧಿಯ ಪರಿಕಲ್ಪನೆಯೇ ಇರಲಿಲ್ಲವೆನ್ನಬಹುದೇನೋ, ಏಕೆಂದರೆ ಹೀಗೆ ಬಂದವರೆಲ್ಲರೂ ದೂರದೃಷ್ಟಿ ಅಭಿವೃದ್ಧಿ ಎಂಬ ಮಂತ್ರ ಜಪಿಸಿದರೆ ಹೊರತು ವಾಸ್ತವದಲ್ಲಿ ಅಂತಹವರೆಲ್ಲರೂ ಕಟ್ಟಿದ್ದು ವೇಲ್ಕಮ್‌ ಗೇಟ್‌, ಕಮಾನುಗಳನ್ನೇ ಹೊರತು ಬೇರೇನನ್ನೂ ಮಾಡಲಿಲ್ಲ.

ವಾರ್ಷಿಕ ವೈದ್ಯಕೀಯ, ಇಂಜಿನಿಯರಿಂಗ್‌ ಶಿಕ್ಷಣದಲ್ಲಿ ಡೋನೇಷನ್‌ ರೂಪದಲ್ಲಿ ಸಂಸ್ಥೆಗೆ 100 ಕೋಟಿಗೂ ಹೆಚ್ಚು ಹಣ ಬಂದರೂ ಸಹ ಅದೆಲ್ಲವೂ ಹೀಗೆ ಪೋಲಾಯ್ತೇ ಹೊರತು ಸಂಸ್ಥೆಯಡಿಯ ಇವೆರಡೂ ಆಸ್ಪತ್ರೆ ಸುಧಾರಣೆಗೆ ಬಳಕೆಯಾಗಿದ್ದು ಕಮ್ಮಿ. ಹೀಗಾಗಿಯೇ 2 ದಶಕದಲ್ಲಿ ಖಾಸಗಿ ರಂಗದಲ್ಲಿ ಕಲಬುರಗಿಯಲ್ಲಿ 20 ಕ್ಕೂ ಹೆಚ್ಚು ಮಲ್ಟಿಸ್ಪೇಶ್.ಯಾಲಿಟಿ ಆಸ್ಪತ್ರೆಗಳು ಗಟ್ಟಿಯತಲೆ ಎತ್ತಿ ಜನಮನ ಸೆಳೆದವು.

ಬಸವೇಶ್ವರ, ಸಂಗಮೇಶ್ವರದಲ್ಲಿದ್ದ ವೈದ್ಯರೇ ಇಂದು ನಗರದಲ್ಲಿ ಬಹುದೊಡ್ಡ ಸೂಪರ್‌ ಕ್ಲಿನಿಕ್‌ ಆರಂಭಿಸಿರೋದು ನೋಡಿದರೆ ಇವೆರಡೂ ಆಸ್ಪತ್ರೆಗಳ ಅಧೋಗತಿಗೆ ಅವರೆಷ್ಟು ಕಾರಣ ಎಂಬುದೂ ಕಣ್ಣಿಗೆ ರಾಚುತ್ತದೆ. ಇಂತಹ ಅಪಸವ್ಯಗಳೇ ಸಂಸ್ಥೆಯನ್ನು, ಆಸ್ಪತ್ರೆ ಸೇರಿದಂತೆ ಇಲ್ಲಿನ ಎಲ್ಲಾ ವ್ಯವಸ್ಥೆಗೆ ಕಾಡುತ್ತಿರೋದರಿಂದಲೇ ಈ ಸಂಸ್ಥೆ ಮೂಲೆಗುಂಪಾಗೋ ಹಂತ ತಲುಪಿದೆ ಎನ್ನಲಾಗುತ್ತಿದೆ.

ಡಾ. ಬಿಲಗುಂದಿ ಅಧ್ಯಕ್ಷತೆಯ ಆಡಳಿತ ಮಂಡಳಿಯಲ್ಲಿ ಅವರೂ ಸೇರಿದಂತೆ 10 ವೈದ್ಯರೇ ಗೆದ್ದು ಬಂದರೂ ಆಸ್ಪತ್ರೆಗಳೆರಡರ ರೋಗಕ್ಕೆ ಮದ್ದು ಸಿಗಲಿಲ್ಲ ಎಂದು ಮತದಾರರೇ ಬೇಸರದಲ್ಲಿರೋದು ನೋಡಿದರೆ ಇಲ್ಲೇನು ನಡೆಯುತ್ತಿದೆ ಎಂಬುದೇ ಗೊತ್ತಾಗದಂತಾಗಿದೆ.

ಬೆವರಿನ ಹಣ ನೀಡಿದ ರೈತರನ್ನೇ ಮರೆತರು: ಹಿಂದಿನ ವಿಭಾಗೀಯ ಕಮೀಷ್ನರ್‌ ಜಿಎನ್‌ ನಾಗರಾಜ್‌ರಾವ್‌, ಮಹಾದೇವಪ್ಪ ರಾಂಪೂರೆ ಸೇರಿ ಈ ಭಾಗದ ಎಪಿಎಂಸಿಯಲ್ಲಿ ರೈತರ ತೆರಿಗೆ ಹಣದ 1 ವರ್ಷದ ಮೊತ್ತವನ್ನೇ ಸಂಸ್ಥೆ ಕಟ್ಟಲು ಬಳಸಿದರಂತೆ. ಆದರಿಂದು ಸಂಸ್ಥೆ ರೈತರ ಮಕ್ಕಳಿಗೆ ಯಾವುದೇ ರಿಯಾಯ್ತಿ, ಸವಲತ್ತು ತನ್ನ ಶಾಲೆ, ಕಾಲೇಜುಗಳಲ್ಲಿ ಕೊಡದೆ ದೂರ ಇಟ್ಟಿರೋದು ದುರಂತ. ಇತ್ತೀಚೆಗೆ ಇಲ್ಲಿನ ಪಿಡಿಎ ಇಂಜಿನಿಯಿರಿಂಗ್‌ ಕಾಲೇಜಲ್ಲಿ ರೈತನ ಪ್ರತಿಕೃತಿ ನಿರ್ಮಿಸಿದ್ದೇ ಬಂತು, ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ ಅನ್ನೋ ಮಾತಿನಂತೆ ವಾಸ್ತವದಲ್ಲಿ ರೈತರಿಗಾಗಿ ಹೈಕಶಿ ಸಂಸ್ಥೆ ಮಿಡಿಯಲೇ ಇಲ್ಲ.