ಗದಗ: 31ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಸದನದ ಒಳಗೂ ಮತ್ತು ಹೊರಗೂ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ವಿಧಾನಪರಿಷತ್ ಎಸ್.ವಿ. ಸಂಕನೂರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಆ. 17ರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಹೈಕಮಾಂಡ್ ಯಾರ ಒತ್ತಡಕ್ಕೆ ಮಣಿದು ಅವರನ್ನು ಸೇರಿಸಿಕೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕು. ಬಿ. ನಾಗೇಂದ್ರ ₹187 ಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಹೊಡೆದಿದ್ದಾರೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ₹187 ಕೋಟಿ ಅಲ್ಲ, ₹89 ಕೋಟಿ ಅಷ್ಟೇ ಅಂತ ಹೇಳುವ ಮೂಲಕ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದರು. ಹೀಗಿದ್ದರೂ ಮತ್ತೆ ಅವರಿಗೆ ಮಂತ್ರಿಗಿರಿ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ದಲಿತ ವಿರೋಧಿಗಳು ಎಂದು ಬಿ. ನಾಗೇಂದ್ರ ಹೇಳಿದ್ದಾರೆ. ದಲಿತರಿಗೆ ಬಿಜೆಪಿ ಅವಧಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿಯನ್ನು ಹೆಚ್ಚಿಸಿದ್ದರು. ಇದನ್ನು ಬಿ. ನಾಗೇಂದ್ರ ಅರಿತುಕೊಳ್ಳಬೇಕು. ಈ ಹಿಂದೆ ಈಶ್ವರಪ್ಪನವರ ಮೇಲೆ ಆರೋಪ ಕೇಳಿ ಬಂದಾಗ ಅವರ ರಾಜೀನಾಮೆಯನ್ನು ಪಡೆಯಲಾಗಿತ್ತು. ಅದರಂತೆ ನಾಗೇಂದ್ರ ಕೂಡ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಲಿಂಗರಾಜಗೌಡ ಪಾಟೀಲ, ಶ್ರೀಪತಿ ಉಡುಪಿ, ಬೂದಪ್ಪ ಹಳ್ಳಿ, ಮಂಜುನಾಥ ಮುಳಗುಂದ, ನಾಗರಾಜ ತಳವಾರ, ಎಂ.ಎಂ. ಹಿರೇಮಠ, ಅನಿಲ ಅಬ್ಬಿಗೇರಿ, ರಮೇಶ ಸಜ್ಜಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಾಳಿಯಂತ್ರ ಅಳವಡಿಕೆ ವೇಳೆ ಬಿದ್ದು ಎಂಜಿನಿಯರ್ ಸಾವು


ಮುಳಗುಂದ: ಸಮೀಪದ ಹರ್ತಿ ರಸ್ತೆಯ ರೈಟ್ ಟ್ರಾನ್ಸಮಿಷನ್ ಆ್ಯಂಡ್ ಡಿಸ್ಟ್ರಿಬ್ಯೂಷನ್ ಕಂಪನಿಯ ಸ್ಟಾಕ್ ಯಾರ್ಡನಲ್ಲಿ ಪವನ ವಿದ್ಯುತ್‌ ಯಂತ್ರದ ಪ್ಯಾನಲ್ ಎತ್ತುವ ವೇಳೆ ಆಕಸ್ಮಿಕವಾಗಿ ಬಿದ್ದು ಜಾರ್ಖಂಡ್‌ ಮೂಲದ ಎಂಜಿನಿಯರ್‌ರೊಬ್ಬರು ಸಾವಿಗೀಡಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಬಿಕಾಶ್ ಯಾದವ್(25) ಸಾವಿಗೀಡಾದ ಎಂಜಿನಿಯರ್. ಮೃತ ಎಂಜಿನಿಯರ್ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ತೀಲಿಯಾಬರಹಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಈ ಭಾಗದಲ್ಲಿ ಗಾಳಿಯಂತ್ರ ಅಳವಡಿಕೆ ಕೆಲಸ ನಡೆದಿದ್ದು, ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಿಕಾಶ್ ಯಾದವ್ ಅವರು ಆ. 9ರಂದು ಸ್ಟಾಕ್ ಯಾರ್ಡನಲ್ಲಿ ಪ್ಯಾನಲ್ ಎತ್ತುವ ವೇಳೆ ಆಕಸ್ಮಿಕವಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಗದುಗಿನ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅಂದೇ ಸಾವಿಗೀಡಾಗಿದ್ದಾರೆ.

ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.