ಕೃತಕ ಬುದ್ಧಿಮತ್ತೆ ಸಾಹಿತ್ಯ ಸೃಷ್ಟಿ, ಭಾಷಾಂತರದಲ್ಲೂ ಹೊಸ ಕ್ರಾಂತಿ ಸೃಷ್ಟಿಸಿದೆ. ತಂತ್ರಜ್ಞಾನ ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಕೊಡುಗೆ ಅಗಾಧ ಎಂದು ಐಟಿ ಕಂಪನಿ ಮುಖ್ಯಸ್ಥ ಸಂಕೇಶ ಪಾಟೀಲ ಹೇಳಿದರು.

ಧಾರವಾಡ:

ಕೃತಕ ಬುದ್ಧಿಮತ್ತೆ ಒಂದು ಸಾಧನ. ಈ ತಂತ್ರಜ್ಞಾನದಿಂದ ಸೃಜನಶೀಲತೆ ಕ್ಷೀಣಿಸಬಹುದು. ಇದರಿಂದ ಉದ್ಯೋಗದ ಅವಕಾಶಗಳು ನಶಿಸುವ ವಾದ ಸುಳ್ಳು. ಆದರೆ, ಉದ್ಯೋಗಗಳ ರೂಪಗಳು ಬದಲಾಗಿವೆ. ಈ ತಂತ್ರಜ್ಞಾನ ದುರ್ಬಳಸದೆ, ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ವಿಜ್ಞಾನಿ ಡಾ. ಎಸ್‌.ಎಂ. ಶಿವಪ್ರಸಾದ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆ; ಸವಾಲು ಮತ್ತು ಅವಕಾಶ ಕುರಿತು ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದರು.

ಸಾಹಿತ್ಯ ಸೃಷ್ಟಿ ಮತ್ತು ಭಾಷಾಂತರದ ಮೇಲೆ ಎಐ ಪ್ರಭಾವದ ವಿಷಯ ಮಂಡಿಸಿದ ಐಟಿ ಕಂಪನಿ ಮುಖ್ಯಸ್ಥ ಸಂಕೇಶ ಪಾಟೀಲ, ಕೃತಕ ಬುದ್ಧಿಮತ್ತೆ ಸಾಹಿತ್ಯ ಸೃಷ್ಟಿ, ಭಾಷಾಂತರದಲ್ಲೂ ಹೊಸ ಕ್ರಾಂತಿ ಸೃಷ್ಟಿಸಿದೆ. ತಂತ್ರಜ್ಞಾನ ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಕೊಡುಗೆ ಅಗಾಧ ಎಂದರು. ಕೃತಕ ಬುದ್ಧಿಮತ್ತೆಯು ಕವಿತೆಗಳನ್ನು ಅಥವಾ ಕಥೆಗಳನ್ನು ಬರೆಯಬಲ್ಲದು ನಿಜ. ಆದರೆ, ಮನುಷ್ಯ ಸಹಜವಾದ ನೋವು, ನಲಿವು ಮತ್ತು ಅನುಭವದ ಆಳ ತಂತ್ರಜ್ಞಾನಕ್ಕೆ ಅಸಾಧ್ಯ. ಎಐ ಕೇವಲ ದತ್ತಾಂಶಗಳು ಸಂಸ್ಕರಿಸಲಿದೆ. ಆದರೆ, ಲೇಖಕರು ಬದುಕು ಸಂಸ್ಕರಿಸುತ್ತಾರೆ ಎಂದರು.

ಎಐ-ಶಿಕ್ಷಣ, ಉದ್ಯೋಗ ಹಾಗೂ ಭವಿಷ್ಯದ ಬದುಕು ವಿಷಯ ಮಂಡಿಸಿದ ಎಚ್.ಎಲ್. ಓಂಪ್ರಕಾಶ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದಲ್ಲಾದ ಬದಲಾವಣೆ ಅರಿವಿಲ್ಲದಂತೆ, ಬಳಸುವ ಪರಿಪಾಠ ನಡೆದಿದೆ ಎಂದರು. ನಂತರ ಸಾಹಿತ್ಯಾಸಕ್ತರೊಂದಿಗೆ ಸಂವಾದ ನಡೆಯಿತು. ಜಿಲ್ಲಾ ಡಯಟ್ ಪ್ರಚಾರ್ಯ ಬಸವರಾಜ ನಾಲ್ವತ್ತವಾಡ, ಡಾ. ಎಸ್.ಎಸ್. ಅಂಗಡಿ, ಗುರುಕುಲ ಸಂಸ್ಥೆ ನಿರ್ದೇಶಕ ಎನ್.ಎಂ. ಪಾಟೀಲ ಇದ್ದರು.