ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಅಮಾನುಷ ಲಾಟಿ ಚಾರ್ಜ್ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ನೀಟ್ ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ನವದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಅಮಾನುಷ ಲಾಟಿ ಚಾರ್ಜ್ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ನಗರದ ಹೊಸಪೇಟೆ ತಾಲೂಕು ಕಚೇರಿಯ ಎದುರು ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಟಿಯರ್ ಗ್ಯಾಸ್ (ಅಶ್ರುವಾಯು) ಹಾಗೂ ಶಾಕ್ ಬಟನ್‌ ಬಳಸಿ ಎಸಗಿದ ದೌರ್ಜನ್ಯವನ್ನು ತೀವ್ರವಾಗಿ

ಹೊಸಪೇಟೆ ತಹಸೀಲ್ದಾರ್‌ರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್‍ಒ ಜಿಲ್ಲಾಧ್ಯಕ್ಷ ರವಿಕಿರಣ್ ಜೆ.ಪಿ. ಮಾತನಾಡಿ, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಹಾಗೂ ಎನ್‌ಟಿಎ ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ವೈದ್ಯರಾಗಿ ದೇಶ ಸೇವೆ ಮಾಡುವ ಕನಸು ಹೊತ್ತು, ವರ್ಷಪೂರ್ತಿ ಹಗಲು​ರಾತ್ರಿ ಕಷ್ಟಪಟ್ಟು ಓದುವ ಬಡ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ’ಕೋಚಿಂಗ್ ಮಾಫಿಯಾ’ ಮತ್ತು ಭ್ರಷ್ಟ ಎನ್‌ಟಿಎ ಚೆಲ್ಲಾಟವಾಡುತ್ತಿದೆ. ಪೋಷಕರು ತಮ್ಮ ಆಸ್ತಿ​ಪಾಸ್ತಿ ಮಾರಿ ವರ್ಷಕ್ಕೆ ₹80,000 ದಿಂದ ₹3 ಲಕ್ಷದವರೆಗೆ ಕೋಚಿಂಗ್ ಸೆಂಟರ್‌ಗಳಿಗೆ ಸುರಿಯುತ್ತಿದ್ದಾರೆ. ಆದರೆ, ಇಡೀ ಪರೀಕ್ಷಾ ವ್ಯವಸ್ಥೆಯು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜಾಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

ತಮ್ಮ ಹಕ್ಕಿಗಾಗಿ ಹಾಗೂ ಭವಿಷ್ಯಕ್ಕಾಗಿ ದೆಹಲಿಯ ಬೀದಿಗಿಳಿದು ನ್ಯಾಯ ಕೇಳಿದ ನಿರಾಯುಧ ವಿದ್ಯಾರ್ಥಿಗಳ ಮೇಲೆ ಕರುಣೆಯಿಲ್ಲದೆ ಲಾಟಿ ಚಾರ್ಜ್ ಮಾಡಲಾಗಿದೆ. ಅಶ್ರುವಾಯು ಚೆಲ್ಲಿ, ಪೆಲ್ಲೆಟ್ ಗನ್ಸ್ ಬಳಸಿ, ಶಾಕ್ ಬಟನ್‌ಗಳನ್ನು ಬಳಸಿ ಹಲ್ಲೆ ನಡೆಸಲಾಗಿದೆ. ವಿದ್ಯಾರ್ಥಿಗಳ ದೇಹದ ಮೇಲಿನ ಗಾಯಗಳು ಹಾಗೂ ಅವರ ದೇಹದಿಂದ ಹರಿದ ನೆತ್ತರು ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಕುಸಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂದು ಈ ಆಕ್ರೋಶದ ಧ್ವನಿ ಕೇವಲ ದೆಹಲಿಯ ಜಂತರ್ ಮಂತರ್‌ಗೆ ಸೀಮಿತವಾಗಿಲ್ಲ. ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಪ್ರಜ್ಞಾವಂತ ಜನಸಮುದಾಯ ಈ ಹೋರಾಟಕ್ಕೆ ಬೆಂಬಲವಾಗಿ ಬೀದಿಗಿಳಿಯುತ್ತಿದ್ದಾರೆ ಎಂದರು.

ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ದೆಹಲಿಯ ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಪೊಲೀಸರು ಮತ್ತು ಗೂಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಭ್ರಷ್ಟಾಚಾರದ ಕೂಪವಾಗಿ ನಿರಂತರವಾಗಿ ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಕಾರಣವಾಗಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯನ್ನು ರದ್ದುಗೊಳಿಸಬೇಕು. ಕೇಂದ್ರ ಶಿಕ್ಷಣ ಸಚಿವರು ಇದೆಲ್ಲವುದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ಮಾತನಾಡಿದರು. ವಿದ್ಯಾರ್ಥಿಗಳಾದ ವೈಷ್ಣವಿ, ಸೈಯದ್ ಸಮೀರ್, ಮೀನಾಕ್ಷಿ, ನಿರ್ಮಲ ಶ್ರೀನಿವಾಸ್, ಹುಲಿಗೆಮ್ಮ, ವಿದ್ಯಾಶ್ರೀ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.